19 June 2025 | Join group

ತಪ್ಪೊಪ್ಪದ ಕಮಲ್ ಹಾಸನ್ : 'ಕನ್ನಡ ತಮಿಳಿನಿಂದ' ವಿವಾದದ ಹೇಳಿಕೆ, ರಾಜ್ಯಾದ್ಯಂತ ಆಕ್ರೋಶ!

  • 30 May 2025 06:47:18 PM

ಚೆನ್ನೈ ನಲ್ಲಿ ನಡೆದ 'ಥಗ್ ಲೈಫ್' ಸಿನಿಮಾದ ಧ್ವನಿಸುರುಳಿ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ರವರು ನೀಡಿದ ಹೇಳಿಕೆ ದಿನದಿಂದ ದಿನಕ್ಕೆ ವಿವಾದದ ಬೆಂಕಿ ಚೆಂಡಿನಂತಾಗುತ್ತದೆ. ಕನ್ನಡ ನಟ ಶಿವರಾಜ್ ಕುಮಾರ್ ಎದುರಲ್ಲೇ 'ತಮಿಳಿನಿಂದ ಕನ್ನಡ ಹುಟ್ಟಿತ್ತು' ಎಂಬ ಮಾತನ್ನು ಕಮಲ್ ಹಾಸನ್ ಹೇಳಿದ್ದರು. ಅದು ಬಹಳ ದೊಡ್ಡ ವಿವಾದವನ್ನು ಹುಟ್ಟಿಹಾಕಿದೆ. ಈ ನಡುವೆ ತಮ್ಮ ಹೇಳಿಕೆಯಿಂದ ಉಂಟಾಗಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿ, 'ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ' ಎಂದು ಹೇಳಿದ್ದಾರೆ. ಆ ಬಗ್ಗೆ ಕಮಲ್ ಅವರೇ ಕೇರಳದಲ್ಲಿ ಸ್ಪಷ್ಟನೆ ಕೂಡ ನೀಡಿದ್ದಾರೆ.

 

ಕನ್ನಡ ಭಾಷೆ ಬಗ್ಗೆ ಕಮಲ್ ಹಾಸನ್ ನೀಡಿದ ಹೇಳಿಕೆಗೆ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದ್ದು, ರಾಜ್ಯದಾದ್ಯಂತ ಕಮಲ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಈ ಬಗ್ಗೆ ಇಂದು ಮಾತನಾಡಿದ ಕಮಲ್ ಹಾಸನ್, 'ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ' ಎಂದು ದರ್ಪದಿಂದ ಹೇಳಿದ್ದಾರೆ. 'ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುತ್ತೇನೆ, ನನ್ನಿಂದ ತಪ್ಪು ಆಗಿಲ್ಲ. ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ, ನಾನು ಕಾನೂನು ಮತ್ತು ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ' ಎಂದಿದ್ದಾರೆ.

 

ಕಮಲ್ ಹಾಸನ್ ಹೇಳಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗ ಕಮಲ್ ಹಾಸನ್ ಹೇಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಕನ್ನಡ ಚಿತ್ರಗಳಲ್ಲಿ ಕಮಲ್ ಹಾಸನ್ ಗೆ ನಟನೆ ಅವಕಾಶ ಕೊಡಬಾರದೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ಕಮಲ್ ಹೇಳಿಕೆ ಖಂಡಿಸಿದ್ದು, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ' ಕಮಲ್ ಹಾಸನ್ ಒಬ್ಬ ಹುಚ್ಚ' ಎಂದಿದ್ದಾರೆ.

 

"ಕಮಲ್ ಉದ್ದಟತನ ನೋಡಿದ್ದೇನೆ. ಯಾವುದೇ ಕನಿಕರ ಇಲ್ಲ. ಇಲ್ಲಿ ಹೇಗೆ ಸಿನಿಮಾ ಬಿಡುಗಡೆ ಮಾಡ್ತಾರೋ ನೋಡ್ತೀನಿ. ಹಂಚಿಗೆದಾರರು ನಮ್ಮ ಜೊತೆ ಕೈಜೋಡಿಸುವ ವಿಶ್ವಾಸ ಇದೆ" ಎಂದು ಸಾರಾ ಗೋವಿಂದು ಹೇಳಿದ್ದಾರೆ.

 

ಕರ್ನಾಟಕ ವಾಣಿಜ್ಯ ಮಂಡಳಿಯು ನಟ ಕಮಲ್ ಹಾಸನ್ ಗೆ ತೀವ್ರ ಎಚ್ಚರಿಗೆ ನೀಡಿದೆ. ಕಮಲ್ ತಮ್ಮ ಹೇಳಿಕೆಗೆ ಕ್ಷಮೆ ಕೇಳದಿದ್ದರೆ 'ಥಗ್ ಲೈಫ್' ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡುವುದಾಗಿ ತಿಳಿಸಿದೆ. ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಹೇಳಿ ಕನ್ನಡಿಗರ ಛೀಮಾರಿಗೆ ಒಳಗಾಗಿರುವ ಕಮಲ್, ತಮ್ಮ ಹಠಮಾರಿ ದೋರಣೆ ಮುಂದುವರಿಸಿದ್ದಾರೆ. ಫಿಲಂ ಚೇಂಬರ್ ಮನವಿಗೂ ಬಗ್ಗದ ಕಮಲ್, 'ತಪ್ಪಾಗಿದ್ದರೆ ಕ್ಷಮೆ, ತಪ್ಪೇ ಇಲ್ಲದಿದ್ದರೆ ಕ್ಷಮೆ ಕೇಳಲ್ಲ' ಎಂದಿದ್ದಾರೆ.

 

ಕಮಲ್ ಹಾಸನ್ ತಮಿಳುನಾಡಿನಲ್ಲಿ ರಾಜಕೀಯ ಪಾರ್ಟಿ ಸ್ಥಾಪಿಸಿ ಜನರ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿವಾದದ ಹೇಳಿಕೆಯಲ್ಲಿ ಸುದ್ದಿಯಲ್ಲಿದ್ದಾರೆ.