'ಕಾಂತಾರ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದ ಮೇಲೆ ರಿಷಬ್ ಶೆಟ್ಟಿ ಅವರ 'ಕಾಂತಾರ 2' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. 'ಕಾಂತಾರ 2' ಸಿನಿಮಾ ಶೂಟಿಂಗ್ ಹಂತದಲ್ಲೇ ಭಾರೀ ಅಡಚಣೆಗಳನ್ನು ಅನುಭವಿಸುತ್ತಿದ್ದು, ಈಗಾಗಲೇ ಬಹಳ ಪ್ರಚಾರವನ್ನು ಪಡೆದುಕೊಂಡಿದೆ. ಹಲವಾರು ದುರ್ಘಟನೆಗಳನ್ನು ಕಂಡಂತಹ ಈ ಸಿನಿಮಾದ ಶೂಟಿಂಗ್ ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹಾಗಾದರೆ ಬನ್ನಿ ನೋಡೋಣ ಯಾವೆಲ್ಲಾ ಘಟನೆಗಳು ಕಾಂತಾರ 2 ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಡೆದಿದೆ?
ಸಿಬ್ಬಂದಿಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಬಸ್ ಅಪಘಾತ
ನವೆಂಬರ್ 25, 2024, ಕರ್ನಾಟಕದ ಉಡುಪಿ ಜಿಲ್ಲೆಯ ಜಡ್ಕಲ್ ಬಳಿ ಸುಮಾರು 20 ಜೂನಿಯರ್ ಕಲಾವಿದರನ್ನು ಕರೆದೊಯುತ್ತಿದ್ದ ಮಿನಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ನಂತರ ಪಲ್ಟಿ ಹೊಡೆದಿತ್ತು. 6 ಜನ ಗಾಯಗೊಂಡು ಶೂಟಿಂಗ್ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ಅರಣ್ಯ ನಾಶ/ಪರಿಸರ ವಿವಾದ
ಜನವರಿ 2025 ರಂದು ಸಕಲೇಶಪುರದ ಗವಿಗುಡ್ಡ ಅರಣ್ಯದಲ್ಲಿ ಸ್ಪೋಟಕಗಳನ್ನು ಬಳಸಿ ಅರಣ್ಯಕ್ಕೆ ಹಾನಿ ಮಾಡಿದ ಬಗ್ಗೆ ಆರೋಪ ಎಸೆಯಲಾಗಿತ್ತು. ಇದರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಸ್ಥಳೀಯರ ಮೇಲೆ ಹಲ್ಲೆ ಮಾಡಿದ ಆರೋಪ ಹೊರಿಸಲಾಗಿತ್ತು. ಕರ್ನಾಟಕ ಅರಣ್ಯ ಇಲಾಖೆ ಪರಿಶೀಲನೆ, ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿತ್ತು.
ಕೆಟ್ಟ ಹವಾಮಾನದಿಂದ ಸೆಟ್ ನಾಶ
ಮೇ 2025 ರಲ್ಲಿ ಕೆಟ್ಟ ಹವಾಮಾನದಿಂದ ಸೆಟ್ ಹಾನಿಯಾಗಿದೆ. ಭಾರೀ ಗಾಳಿ ಮತ್ತು ಮಳೆಯ ಪರಿಮಾಣ ಸೆಟ್ ಹಾನಿಗೊಂಡು ಸಿನಿಮಾ ತಂಡ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಶೂಟಿಂಗ್ ಸ್ಥಗಿತವಾಗಿದ್ದು, ಸಿಬ್ಬಂದಿಗಳು ಸೆಟ್ ಮತ್ತೊಮ್ಮೆ ಪುನರ್ನಿರ್ಮಿಸಬೇಕಾಯಿತು.
ಕಿರಿಯ ಕಲಾವಿದನ ಶೂಟಿಂಗ್ ಸಂದರ್ಭದಲ್ಲಿ ಮರಣ
ಮೇ 06, 2025 ರಂದು ಎಂಎಫ್ ಕಪಿಲ್ ಎನ್ನುವ 33 ವರ್ಷದ ಕಿರಿಯ ಕಲಾವಿದ ಕರ್ನಾಟಕದ ಕೊಲ್ಲೂರು ಬಳಿ ಇರುವ ಸೌಪರ್ಣಿಕಾ ನದಿಯಲ್ಲಿ ತನ್ನ ಊಟದ ಬ್ರೇಕ್ ಸಮಯದಲ್ಲಿ ಸ್ನಾನ ಮಾಡಲು ಹೋಗಿ ಮುಳುಗಡೆಯಾಗಿ ಸಾವನ್ನಪ್ಪಿದ್ದಾರೆ. ಆಮೇಲೆ ಚಿತ್ರೀಕರಣ ಸ್ಥಗಿತಗೊಳಿಸಲಾಯಿತು ಮತ್ತು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದರು. ಎಐಸಿಡಬ್ಲ್ಯೂಎ ಸಂಸ್ಥೆಯು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿತ್ತು.
ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ವಿಧಿವಶ
ಕಾಂತಾರ 2 ನೇ ಶೂಟಿಂಗ್ ಹಂತದ ಬಿಡುವಿನಲ್ಲಿ 33 ವರ್ಷದ ರಾಕೇಶ್ ಪೂಜಾರಿ ಮೇ 12, 2025 ರಂದು ತನ್ನ ಗೆಳೆಯನ ಮನೆಗೆ ಕಾರ್ಯಕ್ರಮಕ್ಕೆಂದು ಹೋಗಿದ್ದಾಗ ಅಲ್ಲಿ ಗೆಳೆಯರ ಜೊತೆ ಡಾನ್ಸ್ ಮಾಡುವ ಸಂದರ್ಭದಲ್ಲಿ ಬಿದ್ದು ಸಾವನ್ನಪ್ಪಿದ್ದರು. ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಪ್ರಸಿದ್ಧ ಹಾಸ್ಯ ನಟರಾಗಿದ್ದರು.
ಮಿಮಿಕ್ರಿ ಕಲಾವಿದ ಕಲಾಭವನ ನಿಜು ನಿಧನ
ಜೂನ್ 14 ರಂದು, 43 ವರ್ಷದ ಮಿಮಿಕ್ರಿ ಕಲಾವಿದ ಕಲಾಭವನ ನಿಜು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಹಠಾತ್ ಹೃದಯಾಘಾತವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನಗೊಂಡಿದ್ದಾರೆ.
ಈ ಮೂಲಕ 3 ನಟರನ್ನು ಕಳೆದುಕೊಂಡಿದ್ದಾರೆ ಮತ್ತು ಇನ್ನಿತರ ಅಡೆತಡೆಗಳನ್ನು ಅನುಮಭವಿಸಿರುವ 'ಕಾಂತಾರ 2' ಚಿತ್ರ ತಂಡ, ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದೆ.