19 June 2025 | Join group

'ನಿಮ್ಮ ಜನಗಣತಿಯಲ್ಲಿ ಖಡ್ಡಾಯವಾಗಿ ತುಳು ಭಾಷೆಯನ್ನೇ ಮಾತೃಭಾಷೆಯನ್ನಾಗಿ ನಮೂದಿಸಿ': ತುಳು ಮಾತೃಭಾಷಾ ಜನಗಣತಿ ಜಾಗೃತಿ ಮನವಿ

  • 15 Jun 2025 08:57:03 PM

ಕರಾವಳಿ: ಕರ್ನಾಟಕದ ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತುಳು ಭಾಷಿಕರಿದ್ದಾರೆ, ಕಾಸರಗೋಡು, ಕುಂದಾಪುರ ಮತ್ತು ಉತ್ತರ ಕನ್ನಡ ಪರಿಸರದಲ್ಲೂ ತುಳು ಭಾಷೆ ಮಾತನಾಡುವವರು ಕಾಣ ಸಿಗುತ್ತಾರೆ.

 

ತುಳು ಭಾಷೆಗೆ ತನ್ನದೇ ಆದ ಸಮೃದ್ಧ ಸಾಹಿತ್ಯ, ಹಾಡುಗಳು ಮತ್ತು ಸಂಸ್ಕೃತಿ ಇದೆ. ತುಳು ಲಿಪಿ ಪ್ರಾಚೀನ ಕಾಲದಿಂದಲೂ ಇದೆ. ತುಳು ಭಾಷೆಯ ಪಾರಂಪರಿಕ ನಾಟಕಗಳು ಮತ್ತು ಭಾವಗೀತೆಗಳು ಬಹಳ ಪ್ರಸಿದ್ಧವಾಗಿವೆ. ತುಳು ಸಂಸ್ಕೃತಿ ಮತ್ತು ಭಾಷೆಯ ಉಳಿವಿಗಾಗಿ ಹಲವಾರು ಸಂಘಟನೆಗಳು ಮತ್ತು ಜನರು ಪ್ರೋತ್ಸಾಹಿಸುತ್ತಿದ್ದಾರೆ.

 

ತುಳು ಲಿಪಿ, ಭಾಷೆ ಮತ್ತು ಸಂಸ್ಕೃತಿಗಾಗಿ ದುಡಿಯುವ ಸಂಸ್ಥೆಯಾದ ತುಳು ಮಾತೃಭಾಷಾ ಜನಗಣತಿ ಜಾಗೃತಿ ಅಭಿಯಾನ ಎಂಬ ಸಂಘಟನೆ ಮುಂಬರುವ ಜನಗಣತಿಯ ಸಂದರ್ಭದಲ್ಲಿ ತುಳುವರು ಮಾತೃಭಾಷೆಯನ್ನು ತುಳು ಎಂದು ನಮೂದಿಸಬೇಕೆಂದು ಅಭಿಯಾನ ಪ್ರಾರಂಭಿಸಿದ್ದಾರೆ.

 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರೂ ಮತ್ತು ತುಳು, ಕನ್ನಡ ವಿದ್ವಾಂಸರು ಆಗಿರುವ ಡಾ. ಬಿ.ಎ ವಿವೇಕ್ ರೈ ತುಳು ಭಾಷೆಯನ್ನು ಜನಗಣತಿ ಸಂದರ್ಭದಲ್ಲಿ ಯಾವ ರೀತಿಯಾಗಿ ನಮೂದಿಸಬೇಕೆಂದು ತಿಳಿಸಿದ್ದಾರೆ.

 

ಅವರು ಮಾತನಾಡಿ 'ದೇಶದ ಜನಗಣತಿ ಮಾಡುವ ಸಂದರ್ಭದಲ್ಲಿ ನಮ್ಮ ಯಾವ ಮಾತೃಭಾಷೆ ಇದೆಯೋ ಅದನ್ನು ನಾವು ಭಾರಿ ಸ್ಪಷ್ಟವಾಗಿ ಹೇಳಬೇಕು. ತುಳುವವರು ಜನಗಣತಿ ಬರುವಾಗ ನಮ್ಮ ಮಾತೃಭಾಷೆ ತುಳು ಎಂದು ಹೇಳಬೇಕು. ರಾಜ್ಯದ 2ನೇ ಭಾಷೆಯಾಗಲಿ ಅಥವಾ ದೇಶದ 8ನೇ ಪರಿಚ್ಛೇದಕ್ಕೆ ಸೇರಿಸುವದೇ ಸಂದರ್ಭದಲ್ಲಿ ತುಳು ಭಾಷೆಗೆ ಮಾನ್ಯತೆ ಸಿಗಲು ಇದು ಬಹಳ ಸಹಕಾರಿಯಾಗುತ್ತದೆ' ಎಂದು ಮನವಿ ಮಾಡಿದ್ದಾರೆ.

 

'2011 ರ ಜನಗಣತಿಯಲ್ಲಿ ಅನೇಕ ತುಳುವರು ಪ್ರಥಮ ಮಾತೃಭಾಷೆ ಕನ್ನಡ ಎಂದು ನಮೂದಿಸಿದ ಕಾರಣ ತುಳುವವರ ಸಂಖ್ಯೆ ಬಹಳ ಕಡಿಮೆಯಾಗಿತ್ತು. 2021 ರ ಜನಗಣತಿ ಇನ್ನೂ ಆಗಿಲ್ಲ, ಜನಗಣತಿ ಮಾಡುವ ಸಮಯದಲ್ಲಿ ಎಲ್ಲಾ ತುಳು ಭಾಷಿಕರು ತಮ್ಮ ಮಾತೃ ಭಾಷೆ ತುಳು ಅಂತ ಹೇಳಬೇಕು' ಎಂದು ಕರೆ ಕೊಟ್ಟಿದ್ದಾರೆ.

 

'ಇದರ ಜೊತೆಗೆ, ಕೆಲವರಿಗೆ ಬೇರೆ ಮಾತೃಭಾಷೆ ಇದ್ದರೂ ಕೂಡ ವ್ಯವಹಾರದಲ್ಲಿ ತುಳು ಭಾಷೆ ಮಾತನಾಡುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ ಲಕ್ಷಗಟ್ಟಕೆ ಜನರಿದ್ದಾರೆ. ಕನ್ನಡ, ಬ್ಯಾರಿ, ಮಲಯಾಳಿ, ಕೊಂಕಣಿ ಅವೆರಲ್ಲೂ ಹೊರಗಡೆ ಮಾತನಾಡುವ ಭಾಷೆ ತುಳು, ಆದ್ದರಿಂದ ಅವರು ಕೂಡ ತಮ್ಮ 2ನೇ ಭಾಷೆ ಎಂದು ತುಳುವನ್ನು ನಮೂದಿಸಬೇಕು' ಎಂದು ಮನವಿ ಮಾಡಿದ್ದಾರೆ.

 

'ತುಳು ಮಾತೃಭಾಷೆ ಇರುವವರು ಸ್ಪಷ್ಟವಾಗಿ ನಮ್ಮ ಮಾತೃಭಾಷೆ ತುಳು ಎಂದು ಹೇಳಬೇಕು. ಜನಗಣತಿಯ ಲೆಕ್ಕಾಚಾರದಲ್ಲಿ ತುಳುವನ್ನು ಮಾತೃಭಾಷೆಯಾಗಿ ಮಾತನಾಡುವವರ ಸಂಖ್ಯೆ ಎಷ್ಟಿದೆ ಮತ್ತು ತುಳು ಭಾಷೆಯನ್ನು 2ನೇ ಭಾಷೆಯಾಗಿ ಮಾತನಾಡುವವರ ಸಂಖ್ಯೆ ಎಷ್ಟಿದೆ ಎಂಬ ಲೆಕ್ಕಾಚಾರ ಸಿಗುತ್ತದೆ. ಇದು ನಮಗೆ ಮಾನ್ಯತೆ ಸಿಗಲು ದೊಡ್ಡ ಮಾನದಂಡವಾಗಲಿದೆ, ಆದ್ದರಿಂದ ಎಲ್ಲರೂ ಈ ಕೆಲಸ ಮಾಡಬೇಕೆಂದು' ವಿನಂತಿಸಿಕೊಂಡಿದ್ದಾರೆ.

 

ತುಳು ಭಾಷೆಗೆ ಮಾನ್ಯತೆ ರಾಜ್ಯ ಮತ್ತು ಕೇಂದ್ರದಲ್ಲಿ ಮಾನ್ಯತೆ ಸಿಗಲು ಹಲವಾರು ವರ್ಷಗಳಿಂದ ರಾಜಕೀಯ, ಸಾಮಾಜಿಕ ಮತ್ತು ಇನ್ನಿತರ ಸಂಘ ಸಂಸ್ಥೆಗಳು ಬಹಳಷ್ಟು ಪ್ರಯತ್ನ ನಡೆಸುತ್ತಿದೆ. 2021 ರಲ್ಲಿ ನಡೆಯಬೇಕಾದ ಜನಗಣತಿ ಕೋವಿಡ್ ಸಾಂಕ್ರಾಮಿಕ ರೋಗ ಇದ್ದ ಕಾರಣ ಮುಂದೂಡಲಾಗಿತ್ತು ಮತ್ತು ಅದನ್ನು 2026 ರಲ್ಲಿ ನಡೆಸುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ.