ದಕ್ಷಿಣ ಕನ್ನಡ: ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಸಂಕಷ್ಟಕ್ಕೆ ಸ್ಪಂದಿಸಲು 'ಒಂದು ದೇಶ ಒಂದು ತುರ್ತುಕರೆ - 112' ಸಹಾಯವಾಣಿಯನ್ನು ಆರಂಭಿಸಲಾಗಿದೆ. ಇನ್ನು ಮುಂದೆ ಜನರು ತುರ್ತು ಸಂದರ್ಭದಲ್ಲಿ ಆಯಾ ಇಲಾಖೆಗಳಿಗೆ ಕರೆ ಮಾಡುವ ಅವಶ್ಯಕತೆ ಇಲ್ಲ.
ಉದಾಹರಣೆಗೆ, ಪೊಲೀಸ್ ಅಥವಾ ಅಗ್ನಿಶಾಮಕ ದಳ ಹೀಗೆ ಬೇರೆ ಬೇರೆ ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ಗೊಂದಲಕ್ಕೆ ಬೀಳದಂತೆ ಪೊಲೀಸ್ ಇಲಾಖೆ 112 ಸಂಖ್ಯೆಗೆ ಕರೆ ಮಾಡಿ ತಮ್ಮ ಎಲ್ಲಾ ಸಮಸ್ಯೆಗಳಿಗೂ ತುರ್ತುಸೇವೆ ಪಡೆಯಬಹುದಾಗಿದೆ.
ಗಲಾಟೆ, ಮಹಿಳಾ ದೌರ್ಜನ್ಯ, ದರೋಡೆ. ಕಳ್ಳತನ, ಸುಲಿಗೆ, ಅಪಘಾತ, ಕೊಲೆ, ಸೆರೆಗಳ್ಳತನ, ಹಿರಿಯ ನಾಗರಿಕರ ಮತ್ತು ಮಕ್ಕಳ ರಕ್ಷಣೆ, ಸಂಶಯ ವ್ಯಕ್ತಿ ಅಥವಾ ವಾಹನ, ಹಿಂಬಾಲಿಸುವಿಕೆ, ಈ ರೀತಿ ಯಾವುದೇ ಸಮಸ್ಯೆಗಳಿಗೆ 112 ದೂರವಾಣಿ ಸಂಖ್ಯೆಯನ್ನು ಡಯಲ್ ಮಾಡುವುದರ ಮೂಲಕ ನಿಮಗೆ ಆಯಾ ಸಂಬಂಧ ಪಟ್ಟ ಇಲಾಖೆಗಳಿಂದ ಪ್ರತಿಕ್ರಿಯೆ ಬರಲಿದೆ.
ಈಗಾಗಲೇ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಸಾರ್ವಜನಿಕ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗಾಗಿ ಒಟ್ಟು 28 ರಷ್ಟು ವಾಹನಗಳನ್ನು ಬಳಸಲಾಗುತ್ತದೆ. ಈ ಕರ್ತವ್ಯಕ್ಕೆ ಬಳಸಲಾಗುವ ವಾಹನಗಳಲ್ಲಿ 21 ಹೊಯ್ಸಳ ಮತ್ತು 7 ಹೆದ್ದಾರಿ ಗುಸ್ತು ವಾಹನಗಳಿದ್ದು, ದಿನದ 24*7 ಗಂಟೆಯೂ ಕಾರ್ಯನಿರ್ವಹಿಸಲಿದೆ.