ಬೆಂಗಳೂರು: ಇತೀಚಿನ ದಿನಗಳಲ್ಲಿ ಶಾಲಾ ಮಕ್ಕಳು ತಮ್ಮ ಬ್ಯಾಗ್ ಹೊತ್ತುಕೊಂಡು ಹೋಗೋದೇ ಒಂದು ದೊಡ್ಡ ಕಷ್ಟದ ಕೆಲಸ. ಆದರೆ ಶಾಲೆಗೆ ಬ್ಯಾಗ್ ತರಬೇಡಿ ಎಂದರೆ ಮಕ್ಕಳಿಗೆ ಎಷ್ಟು ಖುಷಿ ತರಿಸಬಲ್ಲದು ಅಲ್ಲವೇ. ಇದೀಗ ರಾಜ್ಯ ಸರಕಾರ ಈ ಒಂದು ಯೋಜನೆಯನ್ನು ಜಾರಿಗೆ ತರಿಸುವ ಸಲುವಾಗಿ ಸುತ್ತೋಲೆಯನ್ನು ಹೊರಡಿಸಿದೆ.
ಶಾಲಾ ಮಕ್ಕಳು ತಿಂಗಳಲ್ಲಿ ಒಂದು ದಿವಸ ಬ್ಯಾಗ್ ಇಲ್ಲದೆ ಶಾಲೆಗೆ ಬಂದು ಖುಷಿಯಿಂದ ಕಲಿಯುವ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಸರಕಾರ ರಾಜ್ಯದ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ 'ಸಂಭ್ರಮ ಶನಿವಾರ' ಎಂಬ ಹೆಸರಿನಲ್ಲಿ 'ಬ್ಯಾಗ್ ರಹಿತ ದಿನ' ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮಕ್ಕಳನ್ನು ಬಹುಮುಖ ಪ್ರತಿಭೆಗಳಲ್ಲಿ ತೊಡಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹೊರೆಯಾಗಿರುವ ಬ್ಯಾಗ್ ಗಳನ್ನು ಮನೆಯಲ್ಲಿ ಬಿಟ್ಟು ಶಾಲೆಯಲ್ಲಿ ಸಂತಸದಿಂದ ನಾನಾ ರೀತಿಯ ಚಟುವಟಿಗೆಳಲ್ಲಿ ಖುಷಿಯಿಂದ ಪಾಲ್ಗೊಂಡು ಸಂಭ್ರಮಿಸುವುದೇ ಮುಖ್ಯವಾಗಿದೆ.
ಶಿಕ್ಷಣ ಇಲಾಖೆ ಈ ಹಿಂದೆ 'ಬ್ಯಾಗ್ ತೂಕ ಇಳಿಸಿ' ಎಂಬ ಆದೇಶವನ್ನು ಕೂಡ ಹೊರಡಿಸಿತ್ತು. ಶಿಕ್ಷಕರು ಸಂಭ್ರಮ ಶನಿವಾರದ ದಿನ ಮಕ್ಕಳಿಗೆ ಅಗತ್ಯ ರೀತಿಯ ಮಾರ್ಗದರ್ಶನಗಳನ್ನು ನೀಡುವಂತೆ ತಿಳಿಸಲಾಗಿದೆ. ಸಂಭ್ರಮ ಶನಿವಾರದಂದು ತಾಲೂಕು ಮತ್ತು ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಲು ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡಬೇಕೆಂದು ತಿಳಿಸಲಾಗಿದೆ.