10 December 2025 | Join group

ಸುರತ್ಕಲ್ ಸುಕಾನಂದ ಶೆಟ್ಟಿ ಹತ್ಯೆ: 19 ವರ್ಷಗಳಿಂದ ತಲೆಮರೆಸಿದ್ದ ಆರೋಪಿ ಬಂಧನ

  • 20 Nov 2025 03:47:45 PM

ಮಂಗಳೂರು: 2006ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಸಮೀಪ ನಡೆದ ಸುಕಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ, ಕಬೀರ್ ಹಾಗೂ ಅವನ ಗುಂಪು ಶೆಟ್ಟಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಮುಖ ಆರೋಪಿ ಕಬೀರ್‌ಗೆ ಅಡ್ಡೂರು ಮೂಲದ ಸಹೋದರರಾದ ಲತೀಫ್ ಅಡ್ಡೂರು ಮತ್ತು ಅಬ್ದುಲ್ ಸಲಾಂ ಅಡ್ಡೂರು ಇಬ್ಬರು ಎರಡು ದಿನಗಳ ಕಾಲ ಆಶ್ರಯ ನೀಡಿದ್ದು, ನಂತರ ಕಾಸರಗೋಡ್ ಬಳಿಯಲ್ಲಿ ಅವನನ್ನು ಇಳಿಸಿ ತಲೆಮರೆಸಿಕೊಂಡಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

 

ಈಗ ಬಂಧಿತನಾದ ಅಬ್ದುಲ್ ಸಲಾಂ (47) ಹತ್ಯೆಯಾದ ಮೂರು ತಿಂಗಳ ಬಳಿಕ ದೇಶ ಬಿಟ್ಟು ಹೊರಟು, 19 ವರ್ಷಗಳಿಂದ ಪರಾರಿಯಾಗಿದ್ದ. ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡ ಕಾರಣ, ಆರೋಪಪಟ್ಟಿ ಅವನಿಲ್ಲದೆ ಸಲ್ಲಿಸಲಾಗಿತ್ತು.

ಇತ್ತೀಚೆಗೆ ಬಜ್ಪೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ, ನವೆಂಬರ್ 18ರಂದು ರಾತ್ರಿ 8 ಗಂಟೆಗೆ ಬಜ್ಪೆ ಕಿನ್ನಿಪದವಿನಲ್ಲಿ ಅವರನ್ನು ಪೊಲೀಸರು ಬಂಧಿಸಿದರು.

 

2007ರಲ್ಲಿ ಪಾಸ್‌ಪೋರ್ಟ್ ಪಡೆದುಕೊಂಡ ಬಳಿಕ ಆತ ವಿದೇಶದಲ್ಲಿ ಹಲವು ವರ್ಷ ಇದ್ದು ಇತ್ತೀಚೆಗೆ ಹಿಂದಿರುಗಿದ್ದರು. ಅಡ್ಡೂರಿನ ಮನೆಯನ್ನು ಕೆಡವಿದ ನಂತರ ಬಜ್ಪೆ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಆತನ ಸಹೋದರ ಲತೀಫ್ ಇನ್ನೂ ವಿದೇಶದಲ್ಲೇ ಪರಾರಿಯಾಗಿದ್ದಾನೆ.

 

ಈ ಪ್ರಕರಣದಲ್ಲಿ 16 ಆರೋಪಿಗಳು ಈಗಾಗಲೇ ಬಂಧಿತರಾಗಿದ್ದು, ಇನ್ನೂ 11 ಮಂದಿ ಪರಾರಿಯಲ್ಲಿದ್ದಾರೆ. ಅಬ್ದುಲ್ ಸಲಾಂ ವಿರುದ್ಧ ಬಜ್ಪೆ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಹಲವು ಹಳೆಯ ದಾಖಲೆಗಳಿದ್ದು, ರೌಡಿ-ಶೀಟ್‌ನಲ್ಲೂ ಆತನ ಹೆಸರು ಇದೆ. ಹಾಜರಾಗದೆ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ಹಲವು ವರ್ಷಗಳಿಂದ ಅನೇಕ ವಾರಂಟ್‌ಗಳನ್ನು ಹೊರಡಿಸಿತ್ತು. ಇದೀಗ ಬಿಎನ್ಎಸ್ ಸೆಕ್ಷನ್ 209ರ ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

ಬಂಧನ ಕಾರ್ಯಾಚರಣೆ ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಪಿಐ ಪ್ರಮೋದ್ ಕುಮಾರ್ ಪಿ., ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯಕ್ ಮತ್ತು ಸುನಿಲ್ ಕುಸನಾಲೆ ಅವರಿಂದ ನಡೆಸಲಾಯಿತು.