ಬೆಂಗಳೂರು: ನಗರವನ್ನು ಬೆಚ್ಚಿಬೀಳಿಸಿದ 7.11 ಕೋಟಿ ರೂಪಾಯಿ ಹಗಲು ದರೋಡೆ ಪ್ರಕರಣಕ್ಕೆ ಇದೀಗ ಅಚ್ಚರಿ ಟ್ವಿಸ್ಟ್ ಸಿಕ್ಕಿದೆ. ಈ ನಾಟಕದ ಮಧ್ಯದಲ್ಲಿ ಪೋಲೀಸ್ ಕಾನ್ಸ್ಟೆಬಲ್ ಅಣ್ಣಪ್ಪ ನಾಯಕ್ ಇದ್ದಿದ್ದು, ಇಡೀ ದರೋಡೆಯ ಮಾಸ್ಟರ್ಮೈಂಡ್ ಈತನೇ ಎಂದು ತನಿಖೆಯಿಂದ ಹೊರಬಿದ್ದಿದೆ!
ಆರ್ಬಿಐ ಅಧಿಕಾರಿಗಳ ವೇಷ—ಮಧ್ಯಾಹ್ನದ ದಾಳಿ
ಸೌತ್ ಎಂಡ್ ಸರ್ಕಲ್ ಬಳಿ ಬುಧವಾರ ಮಧ್ಯಾಹ್ನ, ಆರ್ಬಿಐ ಅಧಿಕಾರಿಗಳಂತೆ ನಟಿಸಿದ ಗ್ಯಾಂಗ್, ಎಟಿಎಂಗಳಿಗೆ ನಗದು ಸಾಗಿಸುತ್ತಿದ್ದ CMS ವಾಹನವನ್ನು ತಡೆದು ಒಂದೇ ಸುತ್ತಿನಲ್ಲಿ 7.11 ಕೋಟಿ ಕಿತ್ತುಕೊಂಡು ಪರಾರಿಯಾಗಿತ್ತು.
ಪೊಲೀಸ್ ತರಬೇತಿಯನ್ನು ‘ಆಯುಧ’ವನ್ನೇ ಮಾಡಿದ ಕಾನ್ಸ್ಟೆಬಲ್
ಕಾನ್ಸ್ಟೆಬಲ್ ಅಣ್ಣಪ್ಪ ಕಮ್ಮನಹಳ್ಳಿ–ಕಲ್ಯಾಣನಗರ ಗ್ಯಾಂಗ್ ಅನ್ನು ಜಮಾಯಿಸಿದ್ದ ಮತ್ತು ಅವರಿಗೆ ದರೋಡೆ ಮಾಡೋ ತಂತ್ರ ಕಲಿಸಿದ್ದ ಎನ್ನಲಾಗಿದೆ. ಪೊಲೀಸರ ಕಾರ್ಯಪಧ್ಧತಿ ಹೇಗೆ ಇರುತ್ತದೆ ಎನ್ನುವುದನ್ನೇ ‘ಟ್ರಿಕ್’ ಆಗಿ ಬಳಸಿ ತರಬೇತಿ ನೀಡಿದ್ದ ಆತ. CMS ಸಂಸ್ಥೆಯ ಮಾಜಿ ಉದ್ಯೋಗಿಗಳೂ ಈ ಪ್ಲ್ಯಾನಿನಲ್ಲಿ ಕೈ ಜೋಡಿಸಿದ್ದರೆಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ತಿರುಪತಿಯಲ್ಲಿ ಸಿಕ್ಕಿಬಿದ್ದ ಇಬ್ಬರು – ಕಾರೂ ಬಿಟ್ಟು ಪರಾರಿ
ಬೆಂಗಳೂರು ಪೊಲೀಸರು ಶಂಕಿತರ ಫೋಟೋ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ, ಸಿಸಿಬಿ ಮತ್ತು ಆಂಧ್ರದ ಚಿತ್ತೂರು ಪೊಲೀಸರು ತಿರುಪತಿಯಲ್ಲಿ ಇಬ್ಬರು ಆರೋಪಿಗಳನ್ನು ಮಡಿಲಿಗೆ ತಂದಿದ್ದಾರೆ. ದರೋಡೆಯಲ್ಲಿ ಬಳಸಿದ ಇನ್ನೋವಾ ಕಾರು ಕೂಡ ತಿರುಪತಿ ಹೊರವಲಯದಲ್ಲಿ ಆರೋಪಿಗಳು ಬಿಟ್ಟು ಓಡಿಹೋಗಿರುತ್ತಾರೆ.





