ಮಂಗಳೂರು: ತುಳುನಾಡಿನ ಶತಮಾನಗಳ ಧಾರ್ಮಿಕ ಸಂಪ್ರದಾಯಗಳಿಗೆ ಕಾನೂನಿನ ನೆಪದಲ್ಲಿ ತಡೆ ಒಡ್ಡಲಾಗುತ್ತಿದೆಯೇ? ಮಂಗಳೂರಿನ ಕಂಕನಾಡಿಯ ಪ್ರಸಿದ್ಧ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಜಾತ್ರೆಯ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಈ ಬಾರಿ ಪೊಲೀಸ್ ಅನುಮತಿ ನಿರಾಕರಣೆ ಭಕ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
154 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಈ ಆಚರಣೆ, ಅಯೋಧ್ಯೆ ಗಲಾಟೆ, ಕೋಮು ಉದ್ರೇಕ, ಕೋವಿಡ್ ಸಮಯದಲ್ಲೂ ಎಂದಿಗೂ ನಿಲ್ಲಿಸಲ್ಪಟ್ಟಿರಲಿಲ್ಲ. ಆದರೆ ಈ ಬಾರಿ ಜಾತ್ರಾ ಸ್ಥಳದಲ್ಲೇ ಪೊಲೀಸ್ ಪಹರೆಯೊಂದಿಗೆ ಕೋಳಿ ಅಂಕಕ್ಕೆ ತಡೆ ವಿಧಿಸಲಾಗಿದೆ.
ಹರಕೆ ಈಡೇರಿಕೆಯ ನಂಬಿಕೆಯೊಂದಿಗೆ ಕೋಳಿಯನ್ನು ಅಂಕಕ್ಕೆ ಸಮರ್ಪಿಸುವ ಪದ್ಧತಿ ಕರಾವಳಿಯ ಧಾರ್ಮಿಕ ಸಂಸ್ಕೃತಿಯ ಭಾಗವೇ ಆಗಿದೆ. ಆಡಳಿತ ಸಮಿತಿಯ ಮನವಿಗೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಭಕ್ತರು ದೈವದ ಮೊರೆ ಹೋಗಿದ್ದು ಪರಿಹಾರ ದೊರೆಯಲಿದೆ ಎಂಬ ಅಭಯ ದೈವದರ್ಶನದಲ್ಲಿ ದೊರೆತಿದೆ ಎನ್ನಲಾಗಿದೆ.
ಇದಕ್ಕೂ ಮೊದಲು ವಿಟ್ಲದಲ್ಲೂ ಕೋಳಿ ಅಂಕಕ್ಕೆ ತಡೆ ವಿಧಿಸಿ, ರಾಜಕೀಯ ನಾಯಕರ ಮೇಲೆ ಎಫ್ಐಆರ್ ದಾಖಲಾಗಿದ್ದ ಘಟನೆ ಇನ್ನೂ ಚರ್ಚೆಯಲ್ಲಿದೆ. ಸಂಪ್ರದಾಯವೇ ಅಪರಾಧವಾಗುತ್ತಿರುವ ಕಾಲವೇ ಇದು ಎಂದು ಜನ ಪ್ರಶ್ನಿಸುತ್ತಿದ್ದಾರೆ.





