31 January 2026 | Join group

ಕಟೀಲು ನಾಲ್ಕನೇ ಸ್ಥಾನ, ಸುಬ್ರಮಣ್ಯ ಪ್ರಥಮ: ಮುಜರಾಯಿ ಆದಾಯ ಪಟ್ಟಿಯಲ್ಲಿ ಕರಾವಳಿ ದೇವಸ್ಥಾನಗಳು

  • 06 Jan 2026 07:38:48 PM

ಮಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳ ಆದಾಯ ಪಟ್ಟಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಕರಾವಳಿ ಪ್ರದೇಶದ ದೇಗುಲಗಳೇ ಮೇಲುಗೈ ಸಾಧಿಸಿವೆ. ಟಾಪ್ 10 ಆದಾಯ ಗಳಿಸಿದ ದೇವಾಲಯಗಳ ಪೈಕಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಆರು ದೇಗುಲಗಳು ಸ್ಥಾನ ಪಡೆದಿವೆ, ಇದು ಕರಾವಳಿಯ ಧಾರ್ಮಿಕ ಮಹತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

 

ಈ ಪೈಕಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ 2024–25ನೇ ಸಾಲಿನಲ್ಲಿ 36.24 ಕೋಟಿ ರೂ. ಆದಾಯ ಗಳಿಸಿ ರಾಜ್ಯದ ಮುಜರಾಯಿ ದೇವಾಲಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯದಲ್ಲಿ ಸುಮಾರು 3.5 ಕೋಟಿ ರೂ. ಹೆಚ್ಚಳ ಕಂಡುಬಂದಿದೆ.

 

ರಾಜ್ಯದಲ್ಲಿ ಮೊದಲ ಮೂರು ಸ್ಥಾನಗಳನ್ನು ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ಹಾಗೂ ಮೈಸೂರಿನ ಚಾಮುಂಡಿಬೆಟ್ಟದ ದೇವಾಲಯಗಳು ಪಡೆದಿವೆ. ವಿಶೇಷವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು 155.95 ಕೋಟಿ ರೂ. ವಾರ್ಷಿಕ ಆದಾಯದೊಂದಿಗೆ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ.

 

ಸೇವೆಗಳಿಂದಲೇ ಹೆಚ್ಚಿನ ಆದಾಯ

ಕಟೀಲು ದೇವಾಲಯಕ್ಕೆ ವಿವಿಧ ಪೂಜೆ–ಸೇವೆಗಳು, ಕಾಣಿಕೆ ಹುಂಡಿಗಳು, ಇ-ಹುಂಡಿ, ಶೀಘ್ರ ದರ್ಶನ, ವಸ್ತ್ರ ಹಾಗೂ ಪ್ರಸಾದ ಮಾರಾಟ, ವಸತಿ ಮತ್ತು ಕಟ್ಟಡ ಬಾಡಿಗೆ, ಯಕ್ಷಗಾನ ಮೇಳದ ಕಾಣಿಕೆಗಳು ಹಾಗೂ ಠೇವಣಿಗಳ ಬಡ್ಡಿಯಿಂದ ಪ್ರಮುಖ ಆದಾಯ ಬಂದಿದೆ. ವಿವಿಧ ಮೂಲಗಳಿಂದ ಬಂದ ಆದಾಯವು ದೇವಾಲಯದ ಆರ್ಥಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸಿದೆ.

 

ಅನ್ನದಾನ, ವಿದ್ಯಾದಾನಕ್ಕೆ ಪ್ರಮುಖ ವೆಚ್ಚ

ದೇವಾಲಯದ ಒಟ್ಟು ಆದಾಯದಲ್ಲಿ ಅನ್ನದಾನ, ಉತ್ಸವಗಳು, ಸೇವಾ ಆರಾಧನೆ, ವಿದ್ಯಾಸಂಸ್ಥೆಗಳ ನಿರ್ವಹಣೆ, ನೌಕರರ ವೇತನ, ಭದ್ರತಾ ಮತ್ತು ಸ್ವಚ್ಛತಾ ಸಿಬ್ಬಂದಿ ವೆಚ್ಚಗಳಿಗೆ ಹೆಚ್ಚಿನ ಮೊತ್ತ ವ್ಯಯಿಸಲಾಗಿದೆ. ಶಾಲೆ, ಪದವಿಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜುಗಳ ನಿರ್ವಹಣೆಗೆ ಕೋಟ್ಯಾಂತರ ರೂ. ಖರ್ಚಾಗಿದ್ದು, ಸಮಾಜಮುಖಿ ಕಾರ್ಯಗಳಿಗೆ ದೇವಾಲಯ ನೀಡುತ್ತಿರುವ ಕೊಡುಗೆ ಗಮನಾರ್ಹವಾಗಿದೆ.

 

ಕರಾವಳಿಯೇ ಧಾರ್ಮಿಕ ಆರ್ಥಿಕ ಶಕ್ತಿ

ಮುಜರಾಯಿ ಇಲಾಖೆಯ ಅಂಕಿಅಂಶಗಳು ಸೂಚಿಸುವಂತೆ, ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ದೇವಾಲಯಗಳು ಕರಾವಳಿ ಭಾಗದಲ್ಲೇ ಹೆಚ್ಚುಗೊಂಡಿವೆ. ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದು, ನಂತರ ಉಡುಪಿ ಜಿಲ್ಲೆ ಸ್ಥಾನ ಪಡೆದಿದೆ.