21 June 2025 | Join group

ಟೋಲ್ ಗೇಟ್ ತಪ್ಪಿಸಲು ಹೋಗಿ ಒಂದೇ ಕುಟುಂಬದ ನಾಲ್ವರ ದುರ್ಮರಣ!

  • 03 Apr 2025 06:22:47 PM

ಚಿತ್ರ ಕೇವಲ ವಿವರಣೆಗಾಗಿ ಅಳವಡಿಸಲಾಗಿದೆ 

ಬೆಂಗಳೂರು-ಮೈಸೂರ್ ಎಕ್ಸ್‌ಪ್ರೆಸ್‌ ಯ ತೂಬಿನಕೆರೆ ಎಂಬಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಒಂದೇ ಕುಟುಂಬದ ನಾಲ್ವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

 

ಕೆಲವು ಮೂಲಗಳ ಪ್ರಕಾರ, ಟೋಲ್ ಗೇಟ್ ತಪ್ಪಿಸಲು ಹೋಗಿ ಈ ದುರಂತ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಟೋಲ್ ಗೇಟ್ ಗೆ 180 ರೂ. ಕಟ್ಟಬೇಕಾಗಿದ್ದರಿಂದ, ಅದನ್ನು ಉಳಿಸಲು ಹೋಗಿ ಈ ಅಪಘಾತ ಸಂಭವಿಸಿರಬಹುದು ಎಂದು ತಿಳಿಸಲಾಗಿದೆ.

 

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಮುಂದೆ ಹೋಗುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ಐರಾವತ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರನ್ನು ಸತ್ಯಾನಂದ ರಾಜೇ ಆರಸ್ (51), ಅವರ ಪತ್ನಿ ನಿಶ್ಚಿತಾ (45), ಚಂದ್ರು (62), ಅವರ ಪತ್ನಿ ಸುವೇದಿನಿ ರಾಣಿ (50) ಎಂದು ಗುರುತಿಸಲಾಗಿದೆ.

 

ಮೃತರೆಲ್ಲರೂ ಬೆಂಗಳೂರಿನ ಜೆಪಿ ನಗರದವರಾಗಿದ್ದು, ಮಾವನ ಅಂತ್ಯಸಂಸ್ಕಾರಕ್ಕೆ ಮೈಸೂರಿನ ಪಿರಿಯಾಪಟ್ಟಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.

 

ಗಣಂಗೂರು ಟೋಲ್ ಗೆ ಸ್ವಲ್ಪ ಹಿಂದೆ ಎಕ್ಸ್‌ಪ್ರೆಸ್‌ ವೇ‌ನಿಂದ ಎಕ್ಸಿಟ್ ಆಗಲು ಅವಕಾಶವಿದ್ದು, ಕಾರು ಚಾಲಕ ಚಂದ್ರರಾಜೇ ಅರಸ್ ತನ್ನ ನೆಕ್ಸಾನ್‌ ಕಾರನ್ನು ಸ್ಲೋ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಹಿಂದಿನಿಂದ ವೇಗದಲ್ಲಿ ಬರುತ್ತಿದ್ದ ಐರಾವತ ಬಸ್ಸು ಗುದ್ದಿದೆ ಅವರ ಕಾರಿಗೆ ಗುದ್ದಿದೆ. ಟೋಲ್ ಸುಂಕ ಉಳಿಸಲು ತೂಬಿನಕೆರೆ ಬಳಿ ಎಕ್ಸಿಟ್ ಆಗಲು ಕಾರು ಸ್ಲೋ ಮಾಡಿರಬಹುದು ಎಂಬ ಶಂಕೆ ಎದ್ದಿದೆ ಎಂದು ಪ್ರತಿಷ್ಠಿತ ಕನ್ನಡ ಮಾದ್ಯಮಗಳಲ್ಲಿ ಪ್ರಸಾರವಾಗಿದೆ.