ಮಂಗಳೂರು: ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ "ವಿಶ್ವದ ವಿವಿಧ ದೇಶಗಳು ಹಾಗೂ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಮಂಗಳೂರಿಗೆ ಬರುತ್ತಿದ್ದಾರೆ. ಆದರೆ ತುಳುನಾಡಿನ ಜನರು ಉದ್ಯೋಗದ ಹುಡುಕಾಟದಲ್ಲಿ ಇತರ ರಾಜ್ಯಗಳು ಹಾಗೂ ವಿದೇಶಗಳಿಗೆ ವಲಸೆ ಹೋಗುತ್ತಿರುವುದು ಆಶ್ಚರ್ಯಕರ ಹಾಗೂ ವಿಷಾದಕರ ಸಂಗತಿಯಾಗಿದೆ" ಎಂದು ಹೇಳಿದ್ದಾರೆ.
ಈ ವಲಸೆಯಿಂದಾಗಿ ಪೋಷಕರು ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರೂ ಇಲ್ಲಿಯೇ ಉಳಿದು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಸ್ಥಳೀಯವಾಗಿ ಉದ್ಯಮ ಆರಂಭಿಸಬೇಕು ಎಂದು ಅವರು ಹೇಳಿದರು.
ಇಲ್ಲಿ ಉದ್ಯಮ ಅಭಿವೃದ್ಧಿಯಾದರೆ ಸ್ವತಃ ಉದ್ಯೋಗ ಪಡೆಯುವುದರ ಜೊತೆಗೆ ಇತರರಿಗೆ ಸಹ ಉದ್ಯೋಗ ಸೃಷ್ಟಿಸಬಹುದು. ಈ ಕಾರಣಕ್ಕಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಅವರು ಹೇಳಿದರು. ಮಂಗಳೂರುಂಥ ನಗರದಲ್ಲೂ ಇನ್ನೂ ಫೈವ್ ಸ್ಟಾರ್ ಹೋಟೆಲ್ ಇಲ್ಲದಿರುವುದು ವಿಷಾದಕರ ಸಂಗತಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಯವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮಲ್ಲಿ ಇರುವ ಸಣ್ಣ ಪುಟ್ಟ ಹೋಟೆಲ್ ರೆಸ್ಟೋರೆಂಟ್ ಗಳೇ ನಮಗೆ ಫೈವ್ ಸ್ಟಾರ್ ಇದ್ದಂತೆ. ಈಗ ಹೇಗೆ ಇದೆ ಹಾಗೆ ಇರಲಿ, ನಾವು ಇದರಲ್ಲೇ ಸಂತೃಪ್ತಿಯಲ್ಲಿ ಇದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





