ಹಾವೇರಿ, ಮೇ 01 : ಸರಕಾರಿ ಬಸ್ ಡ್ರೈವರ್ ನೊಬ್ಬ ನಮಾಜ್ ಸಮಯದಲ್ಲಿ ತಾನು ಚಲಾಯಿಸುತ್ತಿದ್ದ ಬಸ್ ನ್ನು ಮಾರ್ಗದ ಮಧ್ಯೆ ನಿಲ್ಲಿಸಿ ನಮಾಜ್ ಮಾಡಲು ಹೊರಟ. ಬಸ್ ನ ಒಂದು ಸೀಟಿನ ಮೇಲೆ ತನ್ನ ಎರಡು ಕಾಲುಗಳನ್ನು ಇಟ್ಟು ಮುಂಡಿಯೂರಿ ಪ್ರಾರ್ಥನೆ ಮಾಡುತ್ತಿರುವುದನ್ನು ಮೊಬೈಲ್ ಕ್ಯಾಮೆರದಲ್ಲಿ ಸೀರೆ ಹಿಡಿಯಲಾಗಿದೆ.
ವಿಶೇಷವೆಂದರೆ, ಬಸ್ ನಲ್ಲಿ ಪ್ರಯಾಣಿಕರು ತುಂಬಿದ್ದು ಯಾರೊಬ್ಬರೂ ಡ್ರೈವರ್ ಗೆ ಪ್ರಶ್ನಿಸದೆ ತಮ್ಮಷ್ಟಕ್ಕೆ ಕುಳಿತುಕೊಂಡಿದ್ದರು. ಕೆಲವರು ತಮ್ಮ ಮೊಬೈಲ್ ಫೋನ್ ನೋಡುತ್ತಾ ಡ್ರೈವರ್ ನಮಾಜ್ ಮುಗಿಯುವರೆಗೆ ಕಾಲ ಕಳೆದರು.
ಈ ಕುರಿತು ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಪತ್ರ ಬರೆದ ಸಚಿವ ರಾಮಲಿಂಗಾ ರೆಡ್ಡಿ, ಸೂಕ್ತ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.
ಪ್ರಾರ್ಥನೆ ಮಾಡಲು ಎಲ್ಲರಿಗೂ ಅವಕಾಶ ಇದೆ ಆದರೆ ಸರಕಾರಿ ವಾಹನಗಳನ್ನು ಈ ರೀತಿ ಮಾರ್ಗದ ಮಧ್ಯೆ ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.