ಜೂನ್ 12 ರಂದು ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರ ಕಥೆ ಕೇಳಿದರೆ, ಕರುಳು ಹಿಂಡಿದಂತಾಗುತ್ತದೆ. 242 ಜನರಲ್ಲಿ ಕೇವಲ ಒಬ್ಬನೇ ಬದುಕುಳಿದಿದ್ದರೆ, ಉಳಿದವರು ಇಹಲೋಕ ತ್ಯಜಿಸಿದ್ದರು.
ಇದು ಒಂದು ಕುಟುಂಬದ ಕರುಣಾಜನಕ ಕಥೆ: ಪ್ರತೀಕ್ ಜೋಶಿ ಎಂಬ ಸಾಫ್ಟ್ವೇರ್ ಇಂಜಿನಿಯರ್ ಕಳೆದ ಆರು ವರ್ಷಗಳಿಂದ ಲಂಡನ್ನಲ್ಲಿ ಉದ್ಯೋಗದಲ್ಲಿದ್ದರು. ಅವರ ಪತ್ನಿ ಮತ್ತು ಮುದ್ದಾದ ಮೂರು ಮಕ್ಕಳು ಭಾರತದಲ್ಲಿದ್ದವರು. ಮಕ್ಕಳ ಭವಿಷ್ಯವನ್ನು ರೂಪಿಸಲು, ಕುಟುಂಬವನ್ನು ಒಟ್ಟಾಗಿ ಒಂದೇ ಊರಲ್ಲಿ ತರುವ ಕನಸು ಪ್ರತೀಕ್ ಅವರದಾಗಿತ್ತು.
ಸತತ ಪರಿಶ್ರಮ, ವರ್ಷಗಳ ಯೋಜನೆ ಮತ್ತು ಅಪಾರ ತಾಳ್ಮೆಯ ನಂತರ ಆ ಕನಸು ನನಸಾಗುವ ಹಂತಕ್ಕೆ ಬಂದಿತ್ತು. ವೀಸಾ ಪೂರೈಸಿದ ಅವರು ತಮ್ಮ ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವ ಉತ್ಸಾಹದಲ್ಲಿ ಊರಿಗೆ ಬಂದಿದ್ದರು. ಕುಟುಂಬದ ಎದುರಿರುವ ಭವಿಷ್ಯವನ್ನು ಆನಂದಿಸಿ, ಖುಷಿಯಿಂದ ಎಲ್ಲರೂ ವಿಮಾನ ಹತ್ತಿದರು. ಆದರೆ ಆ ಖುಷಿ ಮತ್ತು ಬೆಟ್ಟದಷ್ಟು ಎತ್ತರದಲ್ಲಿದ್ದ ಕನಸು ಎಲ್ಲವೂ ವಿಧಿಯ ಕ್ರೂರ ಆಟಕ್ಕೆ ಕೊನೆಗಾಣಿಸಿತು.
ಪತ್ನಿ ಡಾ. ಕೋಮಿ ವ್ಯಾಸ್ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಗಂಡನೊಂದಿಗೆ ಇಂದಿನಿಂದ ಬದುಕು ಆರಂಭಿಸಬೇಕೆಂಬ ಆಸೆಯಿಂದ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಲಗೇಜ್ ಪ್ಯಾಕ್ ಮಾಡಿದ್ದರು. ಅಂದು ಬೆಳಗ್ಗೆ ಎಲ್ಲರೂ ಲವಲವಿಕೆಯಿಂದ, ಭರವಸೆಯಿಂದ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದರು.
ಗಂಡ-ಹೆಂಡತಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಉತ್ಸಾಹದಿಂದ ಭಾವಿಸುತ್ತಿದ್ದರು. ಮಕ್ಕಳು ಖುಷಿಯಿಂದ ಆಟವಾಡುತ್ತಾ, ವಿಮಾನದ ಪ್ರಯಾಣವನ್ನು ಸವಿಯಲು ಕಾಯುತ್ತಿದ್ದರು. ವಿಮಾನ ಹತ್ತಿದ ನಂತರ ಐವರು ಒಟ್ಟಿಗೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿದ್ದರು. ‘ಇದೊಂದು ಹೊಸ ಬದುಕಿನ ಪ್ರಾರಂಭ’ ಎಂಬ ಭಾವನೆ ಎಲ್ಲರಲ್ಲಿತ್ತು.
ವಿಮಾನ ರನ್ವೇ ಬಿಟ್ಟು ಮೇಲಕ್ಕೆ ಏರಿದ ತಕ್ಷಣವೇ ಕೆಲವೇ ಕ್ಷಣಗಳಲ್ಲಿ ಕೆಳಕ್ಕೆ ಬಿದ್ದು ಭೀಕರ ದುರಂತ ಸಂಭವಿಸಿತು. ಆ ಕನಸುಗಳು ಮಣ್ಣಾದವು. ಐದು ಜೀವಗಳು, ಆ ಕುಟುಂಬದ ಸಂಪೂರ್ಣ ಅಸ್ತಿತ್ವ, ಕ್ಷಣಾರ್ಧದಲ್ಲಿ ಭಸ್ಮವಾಗಿ ಹೋಯಿತು. ವಿಧಿ ಇಷ್ಟು ಕ್ರೂರಿ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿತ್ತು. ಹೊಸ ಬದುಕಿನ ಕನಸು ಹೊತ್ತು ಹೊರಟ ಐದು ಜೀವಗಳು, ಅದನ್ನು ಆರಂಭಿಸೋ ಮುನ್ನವೇ ವಿಧಿಯ ಕ್ರೂರತೆಯಿಂದ ತಮ್ಮ ಉಸಿರನ್ನು ಕಳೆದುಕೊಂಡರು.