02 February 2026 | Join group

ಪೊಲೀಸ್ ಕಂಪ್ಲೇಂಟ್ ಆಧಾರದ ಮೇಲೆ ಕೊಲೆ ಮಾಡಿ ಹೂತು ಹಾಕಿದ ಶವಗಳ ತನಿಖೆ ನಡೆಸಲಿದೆ ದ. ಕನ್ನಡ ಪೊಲೀಸ್ ಇಲಾಖೆ

  • 04 Jul 2025 08:47:24 PM

ಬೆಳ್ತಂಗಡಿ: ಸರಿಸುಮಾರು 2 ದಶಕಗಳ ಕಾಲ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಈ ಹಿಂದೆ ಕೊಲೆ ಮಾಡಿ ಹೂತಿದ ಹೆಣಗಳನ್ನು ಹೊರಕ್ಕೆ ತೆಗೆದು ತನಿಖೆ ನಡೆಸಬೇಕೆಂದು ಮನವಿ ಮಾಡಿದ ವಿಚಾರ ಇದೀಗ ಭಾರಿ ಸಂಚಾಲನವನ್ನು ಮೂಡಿಸಿದೆ.

 

ದಶಕದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಕೊಲೆ, ಅತ್ಯಾಚಾರ ಆರೋಪದ ಮೇಲೆ ಹೂಳಲಾದ ಶವಗಳನ್ನು ಪೊಲೀಸರು ದೂರು ದಾಖಲಿಸಿದ ನಂತರ ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.

 

ದೂರುದಾರ 1995 ರಿಂದ 2014 ರ ವರೆಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಲವಾರು ಶವಗಳನ್ನು ಹೂತಿರುತ್ತಾರೆ, ಆ ಸ್ಥಳಗಳನ್ನು ತೋರಿಸುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

 

ದೂರುದಾರರು ಪೊಲೀಸರಿಂದ ರಕ್ಷಣೆ ಕೋರಿದ್ದು, ಒಂದು ದಶಕಗಳ ನಂತರ ಈಗ ಮಾಹಿತಿಯನ್ನು ಬಹಿರಂಗಪಡಿಸಲು ಬಂದಿರುವುದು ವಿಷಾದ ಸಂಗತಿ ಎಂದು ಹೇಳಿದ್ದಾರೆ.

 

ಜುಲೈ 3ರ ಗುರುವಾರಂದು ವ್ಯಕ್ತಿಯೊಬ್ಬರು ಸಲ್ಲಿಸಿದ ದೂರಿನ ಕುರಿತು ಸಂಪೂರ್ಣ ಮಾಹಿತಿ ಪಡೆದು ತನಿಖೆ ನಡೆಸಲಿದ್ದೇವೆ ಎಂದು ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ತಿಳಿಸಿದೆ.

 

ಕೊಲೆಯಾದ ವ್ಯಕ್ತಿಗಳಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರು ಸೇರಿದ್ದು ಮೃತದೇಹಗಳನ್ನು ಹೊರತೆಗೆದು ತನಿಖೆ ನಡೆಸಬೇಕೆಂದು ಆ ವ್ಯಕ್ತಿ ಒತ್ತಾಯಿಸಿದ್ದಾರೆ.

 

ಈ ತನಿಖೆಯ ನಂತರ ಅದೆಷ್ಟು ಪ್ರಕರಣಗಳು ಹೊರಬರಲಿದೆ ಅಥವಾ ಎಷ್ಟು ಸತ್ಯಾಂಶವಿದೆ ಎನ್ನುವ ಸತ್ಯಾಸತ್ಯತೆ ಸುಧೀರ್ಘ ತನಿಖೆಯ ನಂತರ ಹೊರ ಬೀಳಲಿದೆ.