ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್
ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಹಗಲು ಮಳೆಯಾಗಿತ್ತು. ಸುಳ್ಯ ತಾಲ್ಲೂಕಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ರಾತ್ರಿ ಸಾಧಾರಣ ಮಳೆಯ ಮುನ್ಸೂಚನೆ ಇದೆ . ಬೆಳಿಗ್ಗೆ ಬಿಸಿಲಿನ ವಾತಾವರಣ ಇರಲಿದ್ದು ಮಧ್ಯಾಹ್ನ ಮೋಡ ಬಂದು ಅಲ್ಲಲ್ಲಿ ತುಂತುರು ಮಳೆಯಾಗಬಹುದು. ಕಾಸರಗೋಡು ಗಡಿಪ್ರದೇಶಗಳಲ್ಲಿ ಸುಳ್ಯ ಪುತ್ತೂರು ಬಂಟ್ವಾಳ ಬೆಳ್ತಂಗಡಿ ತಾಲ್ಲೂಕುಗಳಲ್ಲಿ, ಮಂಗಳೂರು ಉಡುಪಿ ಉ.ಕ ಕರಾವಳಿ ತೀರದ ತಾಲ್ಲೂಕುಗಳಲ್ಲಿ ರಾತ್ರಿ ಮಳೆ ಮುನ್ಸೂಚನೆ ಇದೆ. ನಾಳೆಯಿಂದ ಅಕ್ಟೋಬರ್ 3 ತನಕ ಪ್ರತಿದಿನ ಒಂದೆರಡು ಸಾಧಾರಣ ಮಳೆ ಮುಂದುವರೆಯಲಿದ್ದು ಅಕ್ಟೋಬರ್ 4 ರಿಂದ ಮಳೆ ಬಹುತೇಕ ಕಡಿಮೆ ಆಗಬಹುದು.
ಬಂಗಾಳಕೊಲ್ಲಿಯಲ್ಲಿ ಒರಿಸ್ಸಾ ಸಮೀಪ ಇರುವ ವಾಯುಭಾರಕುಸಿತವು ನಾಳೆ ಮಧ್ಯಭಾರತದತ್ತ ಚಲಿಸಲಿದೆ. ಸೆ 28 ಕ್ಕೆ ಅರಬ್ಬೀಸಮುದ್ರದಲ್ಲಿ ಮುಂಬೈ ಸಮೀಪ ಮತ್ತೆ ಪ್ರಬಲ ಆಗಿ ಅಕ್ಟೋಬರ್ ಮೊದಲ ವಾರ ಪಶ್ಚಿಮ ದಿಕ್ಕಿನಲ್ಲಿ ನಿಧಾನವಾಗಿ ಚಲಿಸಬಹುದು. ಅಕ್ಟೋಬರ್ 1ಕ್ಕೆ ಬಂಗಾಳಕೊಲ್ಲಿಯಲ್ಲಿ ಇನ್ನೊಮ್ಮೆ ವಾಯುಭಾರಕುಸಿತವಾಗಿ ಉತ್ತರಕ್ಕೆ ಚಲಿಸುವ ಮುನ್ಸೂಚನೆ ಇದೆ. ಈ ಎರಡು ವಾಯುಭಾರಕುಸಿತಗಳ ನಂತರ ಕರ್ನಾಟಕದಲ್ಲಿ ಮುಂಗಾರು ಮಳೆ ಬಹುತೇಕ ಕಡಿಮೆ ಆಗಬಹುದು. ಅಕ್ಟೋಬರ್ 2ನೇ ವಾರ ಹಿಂಗಾರು ಆರಂಭವಾಗುವ ಸಾಧ್ಯತೆ ಇದೆ.





