ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯೋರ್ವರ ಕುತ್ತಿಗೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ಬೈಕ್ ಸವಾರನೋರ್ವ ಎಳೆದು ಪರಾರಿಯಾದ ಘಟನೆ ದಾಸಕೋಡಿ ಎಂಬಲ್ಲಿ (ಅ.4) ರಂದು ಸಂಜೆ ವೇಳೆ ನಡೆದಿದೆ.
ಬಾಳ್ತಿಲ ಗ್ರಾಮದ ಚೆಂಡೆ ನಿವಾಸಿಯಾಗಿರುವ ಸರಸ್ವತಿ ಎಂಬವರ ಕುತ್ತಿಗೆಯಲ್ಲಿದ್ದ 2 ಪವನ್ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ.
ಸರಸ್ವತಿ ಅವರು ಕಲ್ಲಡ್ಕ ಪೇಟೆಗೆ ಹೋಗಿ ವಾಪಾಸು ಬಸ್ ನಲ್ಲಿ ಬಂದ ಅವರು ದಾಸಕೋಡಿ ಪೆಟ್ರೋಲ್ ಪಂಪ್ ನ ಬಳಿ ಬಸ್ ನಿಲ್ದಾಣದಲ್ಲಿ ಇಳಿದು ಮನೆ ಕಡೆಗೆ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಹಿಂಬಂದಿಯಿಂದ ಬಂದ ಅಪರಿಚಿತ ವ್ಯಕ್ತಿ ಬೈಕ್ ಸವಾರ ಅಂದಾಜು ಎರಡು ಲಕ್ಷ ಮೌಲ್ಯದ ಚಿನ್ನದ ರೋಪ್ ಸರವನ್ನು ಎಳೆದು ಪರಾರಿಯಾಗಿದ್ದಾನೆ.
ಆತ ದಾಸಕೋಡಿಯಿಂದ ಮಾಣಿ ಕಡೆಗೆ ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.





