ಕಾಬುಲ್: ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ನೀರಿಗಾಗಿ ತತ್ತರಿಸಿರುವ ಪಾಕಿಸ್ತಾನ ಇದೀಗ ಮತ್ತೊಂದು ಸಂಕಟಕ್ಕೆ ಬಿದ್ದಿದೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಘರ್ಷಣೆಯ ಮುಂದುವರಿದ ಭಾಗವಾಗಿ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲು ಅಫ್ಘಾನಿಸ್ತಾನ ಯೋಜಿಸುತ್ತಿದೆ.
ಕುನಾರ್ ನದಿಗೆ ಸಾಧ್ಯವಾದಷ್ಟು ಬೇಗ ಬೃಹತ್ ಅಣೆಕಟ್ಟು ನಿರ್ಮಿಸಲು ತಾಲಿಬಾನ್ ಸರ್ವೋಚ್ಚ ನಾಯಕ ಮೌಲವಿ ಹಿಬತುಲ್ಲಾ ಆದೇಶ ಹೊರಡಿಸಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಭಾರಿ ಆಘಾತ ಉಂಟಾಗಿದೆ. ಇದು ಪಾಕ್ನ ನೀರಿನ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಬಹುದು.
ಅಫ್ಘಾನ್ ಅಧಿಕಾರಿಗಳ ಇತ್ತೀಚಿನ ವರದಿಗಳ ಪ್ರಕಾರ, ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಅವರು ಅಫ್ಘಾನಿಸ್ತಾನದ ಇಂಧನ ಮತ್ತು ಜಲ ಸಚಿವಾಲಯಕ್ಕೆ ಕುನಾರ್ ನದಿಗೆ ತಕ್ಷಣವೇ ಅಣೆಕಟ್ಟು ನಿರ್ಮಿಸುವಂತೆ ಆದೇಶಿಸಿದ್ದಾರೆ.
ಕುನಾರ್ ಪಾಕಿಸ್ತಾನದ ಚಿತ್ರಾಲ್ ನದಿಗೆ ಹರಿಯುತ್ತದೆ, ಆದ್ದರಿಂದ ಇದು ಕೆಳಮುಖ ನೀರಿನ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಪಾಕಿಸ್ತಾನದ ಕೊರತೆಯನ್ನು ಉಲ್ಬಣಗೊಳಿಸಲಿದೆ.
ಕಾಶ್ಮೀರ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ ನಂತರ ಭಾರತವು ಏಪ್ರಿಲ್ 2025 ರಲ್ಲಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಪರಿಸ್ಥಿತಿಗಳು ಸುಧಾರಿಸುವವರೆಗೆ ನೀರು ಹಂಚಿಕೆಯಲ್ಲಿ ಸಹಕಾರವನ್ನು ಸ್ಥಗಿತಗೊಳಿಸುವುದಾಗಿ ಭಾರತ ಹೇಳಿದೆ.
ಒಂದು ವೇಳೆ ಈ ಯೋಜನೆ ಸಂಪೂರ್ಣಗೊಂಡರೆ ಪಾಕಿಸ್ತಾನ ನೀರಿಗಾಗಿ ಪರದಾಡುವ ಕಾಲ ಬರಲಿದೆ. ಈ ಎಲ್ಲಾ ಕ್ರಮಗಳು ಸಂಪನ್ಮೂಲಗಳ ಮೇಲಿನ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಲಿವೆ.





