ಬೆಂಗಳೂರು: ಹಲಾಲ್ ಪ್ರಮಾಣೀಕರಣ ಸಂಸ್ಥೆಗಳನ್ನು ತಕ್ಷಣವೇ ನಿಷೇಧಿಸುವಂತೆ ಆಗ್ರಹಿಸಿ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಈ ಸಂಸ್ಥೆಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಸಂಗ್ರಹಿಸಿದ ಹಣವು ರಾಷ್ಟ್ರವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಹಲಾಲ್ ಸರ್ಟಿಫಿಕೇಟ್ ನಿಂದ ಕೆಲ ಸಂಘಟನೆಗಳು ಹಣ ದುರ್ಬಳಕೆ ಮಾಡ್ತಿವೆ. ಹೀಗಾಗಿ ಹಲಾಲ್ ಸರ್ಟಿಫಿಕೇಟ್ ನಿಷೇಧ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದು ಆಗ್ರಹಿಸಿದ್ದಾರೆ.
'ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಉತ್ತರ ಪ್ರದೇಶ ಸರ್ಕಾರವು ಅಂತಹ ಎಲ್ಲಾ ಸಂಸ್ಥೆಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಅನುಗುಣವಾಗಿ, ಹಲಾಲ್ ಪ್ರಮಾಣೀಕರಣ ಸಂಸ್ಥೆಗಳಿಂದ ಹಲಾಲ್ ನಿಧಿಗಳ ದುರುಪಯೋಗ ಮತ್ತು ಅವುಗಳ ಕಾರ್ಯಾಚರಣೆಗಳನ್ನು ನಿಷೇಧಿಸುವ ತುರ್ತು ಅಗತ್ಯದ ಬಗ್ಗೆ ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಸರ್, ನವೆಂಬರ್ 2023 ರಲ್ಲಿ ಹಲಾಲ್ ಪ್ರಮಾಣೀಕರಣ ಸಂಸ್ಥೆಗಳನ್ನು ನಿಷೇಧಿಸುವಂತೆ ಕೋರಿ ನಾನು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯೆಲ್ ಜಿ ಅವರಿಗೆ ಪತ್ರ ಬರೆದಿದ್ದೆ' ಎಂದಿದ್ದಾರೆ.





