ಚಿಕ್ಕಮಗಳೂರು: ನಾಳೆ ಹಸೆಮಣೆಯೇರಬೇಕಿದ್ದ ನವವಧು ಇಂದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ನಡೆದಿದೆ.
ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಮದುವೆ ಸಿದ್ಧತೆಯಲ್ಲಿ ಸಂತಸದಲ್ಲಿದ್ದ ವಧು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಶೃತಿ (32) ಮೃತ ಯುವತಿ.
ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿದೆ. ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಶೃತಿ ಮದುವೆ ತರೀಕೆರೆ ಪಟ್ಟಣದ ದಿಲೀಪ್ ಅವರೊಂದಿಗೆ ನಿಶ್ಚಯವಾಗಿತ್ತು.
ಇಬ್ಬರ ಕುಟುಂಬಗಳ ನಡುವೆ ಒಳ್ಳೆಯ ಸಂಬಂಧವಿತ್ತು. ನಾಳೆಯ ಮದುವೆಯನ್ನು ತರೀಕೆರೆ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಸಬೇಕಿತ್ತು. ಎಲ್ಲಾ ತಯಾರಿಗಳು ನಡೆದಿತ್ತು. ವರ-ವಧುವಿನ ಉಡುಗೆಗಳು, ಅಲಂಕಾರಗಳು, ಆಹಾರದ ತಯಾರಿ ಎಲ್ಲವೂ ಸಿದ್ಧವಾಗಿತ್ತು.
ಸಂಬಂಧಿಕರು, ಬಂಧು-ಬಳಗ ಆಗಮಿಸಿ ಸಂಭ್ರಮದಲ್ಲಿದ್ದರು. ಆದರೆ ಶೃತಿ ಅವರ ಈ ದಿಢೀರ್ ಸಾವು ಎಲ್ಲರನ್ನು ದಿಗ್ಭ್ರಾಂತರನ್ನಾಗಿಸಿದೆ. ಈಗ ಮದುವೆಯ ಬದಲು ಅಂತ್ಯಕ್ರಿಯೆಯ ತಯಾರಿ ನಡೆದಿದೆ.





