ತುಮಕೂರು: ಹಸುವಿನ ಬಾಲ ಕತ್ತರಿಸಿ ಕಿರಾತಕ ಕೃತ್ಯ ಎಸಗಿದ್ದು, ಕೋಮು ಭಾವನೆ ಕೆರಳಿಸಲು ಈ ಕೆಲಸ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ಬೀಡಾಡಿ ಹಸುವೊಂದು ತುಮಕೂರು ನಗರ, ಅಶೋಕ ನಗರ, ವಿದ್ಯಾನಗರ, ಎಸ್ಐಟಿ ಬಡಾವಣೆಗಳಲ್ಲಿ ಓಡಾಡಿಕೊಂಡಿತ್ತು. ಈ ಬಡಾವಣೆಯ ಅಂಗಡಿ ಮಾಲೀಕರು, ಮನೆಯವರು ಹಸುವಿಗೆ ಧಾನ್ಯವನ್ನು, ಹಣ್ಣುಗಳನ್ನು ಕೊಡುತ್ತಿದ್ದರು.
ಆದರೆ ಕೆಲ ದಿನಗಳ ಹಿಂದೆ ರಾತ್ರಿವೇಳೆ ಯಾರೋ ಕಿಡಿಗೇಡಿಗಳು ಹಸುವಿನ ಬಾಲವನ್ನು ಮಾರಕಾಸ್ತ್ರಗಳಿಂದ ಕೊಯ್ದು ವಿಕೃತಿ ಮೆರೆದಿದ್ದಾರೆ. ಕೇವಲ ಹಸುವಿನ ಬಾಲ ಅಷ್ಟೇ ಅಲ್ಲ, ಪೃಷ್ಠ ಭಾಗಕ್ಕೂ ಗಾಯಗೊಳಿಸಲಾಗಿದೆ. ಒಂದೇ ಸಮನೆ ರಕ್ತ ಸುರಿಯುತ್ತಿರುವುದ್ದನ್ನು ಕಂಡ ಸಾರ್ವಜನಿಕರು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಬಜರಂಗದಳ ಕಾರ್ಯಕರ್ತರು ಪಶು ವೈದ್ಯರನ್ನು ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.





