ಮಂಗಳೂರಿನಿಂದ ಅಯೋಧ್ಯೆಗೆ ನೇರ ರೈಲು ಸಂಪರ್ಕಕ್ಕೆ ಸಂಸದರಿಂದ ಮನವಿ

  • 19 Jul 2025 03:59:53 PM

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರು–ಅಯೋಧ್ಯೆ ನೇರ ರೈಲು ಸಂಪರ್ಕ ಒದಗಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

 

ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಅಯೋಧ್ಯೆ ಯಾತ್ರೆಗೆ ತೀವ್ರ ಶ್ರದ್ದೆಯಿದ್ದು, ಪ್ರಸ್ತುತ ನೇರ ಸಂಪರ್ಕ ಇಲ್ಲದ ಕಾರಣದಿಂದ 40 ಗಂಟೆಗಳ ಪ್ರಯಾಣದ ತೊಂದರೆ ಅನುಭವಿಸುತ್ತಿದ್ದಾರೆ.

 

ಹಾಸನ, ಅರಸಿಕೆರೆ, ಬಳ್ಳಾರಿ ಅಥವಾ ಕೊಂಕಣ ಮಾರ್ಗವಾಗಿ ಮಡಗಾಂವ್, ಕಲ್ಯಾಣ, ನಾಗುರ ಮಾರ್ಗವಾಗಿ ವಾರಕ್ಕೆ ಒಂದು ಅಥವಾ ಎರಡು ಬಾರಿ ನೇರ ರೈಲು ಸಂಪರ್ಕ ನೀಡುವಂತೆ ಅವರು ಆಗ್ರಹಿಸಿದ್ದಾರೆ.

 

ಜೊತೆಗೆ ಉಳ್ಳಾಲ ರಾಣಿ ಅಬ್ಬಕ್ಕರ 500ನೇ ಜಯಂತಿ ನಿಮಿತ್ತ ಕಣ್ಣೂರು ಎಕ್ಸ್‌ಪ್ರೆಸ್‌ಗೆ ‘ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್’ ಎಂದು ಮರುನಾಮಕರಣ ಮಾಡಬೇಕೆಂಬ ಮನವಿಗೂ ಅರ್ಜಿ ಸಲ್ಲಿಸಿದ್ದಾರೆ.