ದೇಶದ ಅತೀ ಶ್ರೀಮಂತ ದೇವಸ್ಥಾನ ತಿರುಪತಿ ತಿಮ್ಮಪ್ಪ ದೇವರಿಗೆ ಮೈಸೂರು ಅರಮನೆಯಿಂದ ಬಹು ದೊಡ್ಡ ಕೊಡುಗೆಯೊಂದು ನೀಡಲಾಗಿದೆ. ತಿರುಪತಿ ದೇವಸ್ಥಾನಕ್ಕೆ 100ಕೆಜಿ ತೂಕದ 2 ಬೆಳ್ಳಿ ದೀಪಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
ಮೈಸೂರು ಅರಮನೆಯ ರಾಜಮಾತೆ ಪ್ರಮೋದ ದೇವಿ ಒಡೆಯರ್, ಮೈಸೂರು ಸಂಸದ ಯುದುವೀರ್ ಒಡೆಯರ್ ಮತ್ತು ಕುಟುಂಬಸ್ಥರು ತಿರುಪತಿ ದೇವಾಲಯಕ್ಕೆ ತೆರಳಿ ಈ ಬ್ರಹತ್ ಗಾತ್ರದ ಬೆಳ್ಳಿಯ ದೀಪಗಳನ್ನು ರಂಗನಾಯಕಕುಲ ಮಂಟಪದಲ್ಲಿ ನಡೆದ ಅಧಿಕೃತ ಹಸ್ತಾಂತರ ಸಮಾರಂಭದಲ್ಲಿ ಟಿಟಿಡಿ ಆಡಳಿತ ಮಂಡಳಿಗೆ ರವಾನಿಸಿದರು.
ಯಾಕೆ ಮೈಸೂರು ಅರಮನೆ ತಿರುಪತಿಗೆ ದೀಪ ನೀಡಿದೆ?
ಸುಮಾರು 300 ವರ್ಷಗಳ ಹಿಂದೆ, ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಿರುಮಲ ದೇವಸ್ಥಾನಕ್ಕೆ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದರು. ಆ ನಂದಾದೀಪಗಳು ತಿರುಪತಿ ವೆಂಕಟೇಶ್ವರನ ಗರ್ಭ ಗುಡಿಯಲ್ಲಿ ವರ್ಷಾನುಗಟ್ಟಲೆ ಜ್ವಲಿಸುತಿತ್ತು. ಆದರೆ ಆ ಹಳೆಯ ದೀಪಗಳು ದುರಸ್ಥಿಗೊಂಡಿದ್ದವು. ಈ ವಿಷಯದ ಬಗ್ಗೆ TTD ರಾಜಮಾತೆ ಪ್ರಮೋದಾದೇವಿ ಒಡೆಯರ್ ಗೆ ಮಾಹಿತಿ ಕಳುಹಿಸಿದ್ದರು.
ತಿರುಪತಿ ತಿಮ್ಮಪ್ಪ ದೇವಸ್ಥಾನ ಮತ್ತು ಒಡೆಯರ್ ರಾಜಮನೆತನಕ್ಕೂ ಬಹಳ ವರ್ಷಗಳ ನಂಟಿದೆ. ಈಗ ಉರಿಯುತ್ತಿರುವ ದೀಪಗಳು ಹಾನಿಯಾಗಿವೆ ಎಂಬ ವಿಚಾರ ತಿಳಿದ ರಾಜಮಾತೆ, 2 ಹೊಸ 1 ಕೋಟಿಯಷ್ಟು ಬೆಲೆಬಾಳುವ ಬೆಳ್ಳಿಯ ನಂದಾದೀಪವನ್ನು ಸಮರ್ಪಿಸುವ ಮೂಲಕ ತಿರುಪತಿ ಮತ್ತು ಮೈಸೂರು ರಾಜಮನೆತನದ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಈ ದೊಡ್ಡ ಗಾತ್ರದ ನಂದಾದೀಪ ತಯಾರಿಸಲು 2 ತಿಂಗಳಷ್ಟು ಸಮಯ ತೆಗೆದುಕೊಳ್ಳಲಾಗಿದೆ. ಒಟ್ಟಾರೆಯಾಗಿ ಮೈಸೂರು ರಾಜಮನೆತನ ಮತ್ತು ತಿರುಪತಿ ದೇವಸ್ಥಾನಕ್ಕೆ ಇರುವ ಹಲವಾರು ವರುಷಗಳ ಸಂಬಂಧ ಇನ್ನು ಮುಂದಕ್ಕೂ ಗಟ್ಟಿಯಾಗಿ ಮುಂದುವರಿಯಲಿದೆ.