ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಸಂಕೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾದ ಎಂಟು ದೇವಾಲಯಗಳ ಪ್ರಾಣಪ್ರತಿಷ್ಠೆಯು ಪೂರ್ಣ ವೈದಿಕ ಸಂಪ್ರದಾಯದ ಪ್ರಕಾರ ಜೂನ್ 5 ರಂದು ನೆರವೇರಲಿದೆ. ಜನವರಿ 22, 2024 ರಂದು ಶ್ರೀರಾಮನನ್ನು ಬಾಲಕ ರಾಮನಾಗಿ ಪ್ರತಿಷ್ಠಾಪಿಸಲಾಯಿತು. ಈಗ ಎರಡನೇ ಪ್ರಾಣ ಪ್ರತಿಷ್ಠಾಪನೆಯು ತಯಾರಿ ಭರದಿಂದ ಸಾಗುತ್ತಿದೆ.
ಸೀತಾಮಾತ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಾನ್ ದೇವರುಗಳ ವಿಗ್ರಹದೊಂದಿಗೆ, ಶ್ರೀರಾಮನ ಭವ್ಯ ವಿಗ್ರಹವನ್ನು ದೇವಾಲಯದ ಮೊದಲ ಮಹಡಿಯಲ್ಲಿ ವಿಧ್ಯುಕ್ತವಾಗಿ ಸ್ಥಾಪಿಸಲಾಗುವುದು. ಭಾರತ ಮತ್ತು ವಿದೇಶಗಳಿಂದ ಸಾಧು ಸಂತರು ಈ ಕಾರ್ಯಕ್ರಮಕ್ಕೆ ಭಾಗವಹಿಸುವ ನೀರೀಕ್ಷೆಯಿದೆ.
ಈ ದೇವಾಲಯವನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಮೊದಲನೇ ಹಂತ ಕಳೆದ ವರ್ಷ ಶ್ರೀ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಪೂರ್ಣಗೊಂಡಿತು. ಈಗಾಗಲೇ ಭದ್ರತಾ ಬಿಗಿಗೊಳಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕಾಶಿ ಮತ್ತು ಅಯೋಧ್ಯೆಯ ಒಟ್ಟು 101 ವೇದ ವಿದ್ವಾಂಸರು ಈ ಆಚರಣೆಯ ಮೇಲ್ವಿಚಾರಣೆ ಮಾಡಲಿದ್ದಾರೆ. ಒಟ್ಟು 3 ದಿನದ ಈ ಧಾರ್ಮಿಕ ಆಚರಣಾ ಕಾರ್ಯಕ್ರಮವು, ಜೂನ್ 3 ರಿಂದ ಶುರುವಾಗಿ ಜೂನ್ 5 ರವರೆಗೆ ನೆರವೇರಲಿದೆ. ಸ್ಥಳ ಶುದ್ದೀ ಮತ್ತು ಇನ್ನಿತರ ಕಾರ್ಯಕ್ರಮಗಳು ಮೇ 30 ರಿಂದ ಪ್ರಾರಂಭವಾಗಿದೆ.