ಕೊಲ್ಲೂರು : ಕರ್ನಾಟಕದ ಅತ್ಯಂತ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲದಲ್ಲಿ ಈ ವರ್ಷದ ಅತೀ ಹೆಚ್ಚಿನ ಕಾಣಿಕೆ ಕಳೆದ ಮೇ ತಿಂಗಳಲ್ಲಿ ಸಂಗ್ರಹವಾಗಿದೆ.
ಶ್ರೀದೇವಿಯ ಹುಂಡಿಯಲ್ಲಿ ಒಂದು ಕೋಟಿ ನಲವತ್ತು ಲಕ್ಷ (1.40 ಕೋ. ರೂ) ರೂಪಾಯಿಯಷ್ಟು ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದ್ದು ದಾಖಲೆ ನಿರ್ಮಿಸಿದೆ. ಇದು ಹುಂಡಿಯಲ್ಲಿದ್ದ ನಗದು ಚಿನ್ನ ಬೆಳ್ಳಿ ಆಭರಣಗಳ ಒಟ್ಟು ಮೊತ್ತವಾಗಿದೆ ಎಂದು ವರದಿಯಾಗಿದೆ.
ದೇಶದ ನಾನಾ ಕಡೆಗಳಿಂದ ಭಕ್ತಾದಿಗಳು ಕೊಲ್ಲೂರು ಶ್ರೀ ಮೂಕಾಂಬಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಕೇರಳಿಗರ ದಿನನಿತ್ಯದ ಆರಾಧ್ಯ ದೇವಿಯಾದ ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲಕ್ಕೆ ಕೇರಳದಿಂದ ಪ್ರತಿ ವರ್ಷ ಲಕ್ಷಾನುಗಟ್ಟಲೆ ಭಕ್ತಾದಿಗಳು ಭೇಟಿ ನೀಡುತ್ತಾರೆ. ಮಾತ್ರವಲ್ಲದೆ ರಾಜಕೀಯ ಮುಖಂಡರುಗಳು, ಸಿನಿಮಾ ತಾರೆಯರು ಉದ್ಯಮಿಗಳು ಶ್ರೀದೇವಿಯ ದರ್ಶನಕ್ಕೆ ಕೊಲ್ಲೂರಿಗೆ ಭೇಟಿ ನೀಡುತ್ತಲೇ ಇರುತ್ತಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ರಾಜ್ಯದ ಹೆಚ್ಚು ಆದಾಯವಿರುವ ಕ್ಷೇತ್ರವಾಗಿರುತ್ತದೆ. ಆಡಳಿತ ಮಂಡಳಿಯ ಪ್ರಕಾರ ಕಳೆದ ಐದು ತಿಂಗಳಲ್ಲಿ ಸರಿಸುಮಾರು 30,000ಕ್ಕೂ ಹೆಚ್ಚು ಭಕ್ತಾದಿಗಳು ಪ್ರತಿದಿನ ಕ್ಷೇತ್ರಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.