20 June 2025 | Join group

ಬಂಟ್ವಾಳ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ ಪೂರ್ಲಿಪಾಡಿ ನಿಧನ

  • 16 Feb 2025 12:09:46 PM

Balthila : ಬಂಟ್ವಾಳದ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಬಿ.ಕೆ. ಅಣ್ಣು ಪೂಜಾರಿ ಪೂರ್ಲಿಪಾಡಿ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ನಿಧನ ಹೊಂದಿದ್ದಾರೆ. ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದ ಅವರು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಅವರು ತಮ್ಮ ಜೀವನದ ಅಂತಿಮ ಉಸಿರು ನಿಲ್ಲಿಸಿದ್ದಾರೆ.

 

ಕಲ್ಲಡ್ಕ ಬಾಳ್ತಿಲ ಪಂಚಾಯತಿನ ಪ್ರಸ್ತುತ ಅಧ್ಯಕ್ಷರಾಗಿರುವ ಇವರು, 2023 ರ ಆಗಸ್ಟ್ ತಿಂಗಳಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದರು. ಇವರು ಬಾಳ್ತಿಲ ಗ್ರಾಮದ ಕಲ್ಲಡ್ಕದ ಪೂರ್ಲಿಪಾಡಿಯಲ್ಲಿ ತಮ್ಮ ಕುಟುಂಬದೊಂದಿಗೆ ನೆಲಸಿದ್ದವರು. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಇವರು ಸರಿಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವೆಕರಾಗಿ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯವಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ, ಎಲ್ಲಾ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು, ನಂತರದ ದಿನಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

 

ಶ್ರೀ ಅಣ್ಣು ಪೂಜಾರಿ, ಪೂರ್ಲಿಪಾಡಿ ಅವರು ಬಾಳ್ತಿಲ ಗ್ರಾಮ ಪಂಚಾಯತ್ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರು, ಹಾಗೂ ಬಾಳ್ತಿಲ ಪಂಚಾಯತ್ ವ್ಯಾಪ್ತಿಯ ಎಲ್ಲಾ ಪ್ರದೇಶಗಳನ್ನು ಮತ್ತಷ್ಟು ಅಭಿವೃದ್ಧಿಯ ಹಾದಿಗೆ ಕೊಂಡು ಹೋಗುವ ಕನಸು ಕಂಡಿದ್ದರು.

 

ಮೃತರು ಹೆಂಡತಿ ಹಾಗೂ ಮಕ್ಕಳನ್ನು ಅಗಲಿದ್ದು, ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಿದ್ದಾರೆ. ರಾಜಕೀಯ ಮುಖಂಡರು ಮತ್ತು ಊರಿನ ನಾಗರಿಕರು ಅಂತಿಮ ದರ್ಶನವನ್ನು ಮಾಡುತ್ತಿದ್ದಾರೆ.