ಮಹಾದೇವಪ್ಪಗೂ ಫ್ರೀ, ಕಾಕಾಸಾಹೇಬಗೂ ಫ್ರೀ ಅಂತ ಚುನಾವಣಾ ಸಂದರ್ಭದಲ್ಲಿ ಭಾಷಣ ಬೀಗುತ್ತಿದ್ದ ಸಿದ್ದರಾಮಯ್ಯ, ಚುನಾವಣೆ ಮುಗಿದು ಮುಖ್ಯಮಂತ್ರಿ ಆದ ನಂತರ ಒಂದು ಕಡೆಯಿಂದ ಫ್ರೀ ಕೊಟ್ಟು ಇನ್ನೊಂದು ಕಡೆಯಿಂದ ರಾಜ್ಯದ ಜನರಿಂದ ಕಸಿದು ಕೊಳ್ಳುವ ಹೊಸ ನೀತಿಯನ್ನು ಅನುಸರಿಸುತ್ತಿದ್ದಾರೆ.
ಈಗಾಗಲೇ 4 ರೂ. ಹಾಲಿನ ಮತ್ತು ವಿದ್ಯುತ್ ದರ ಬೆಲೆ ಏರಿಸಿದ ಬೆನ್ನಲ್ಲೇ, ಇದ್ದಕ್ಕಿಂದಂತೆ ಡೀಸೆಲ್ ಬೆಲೆ ಏರಿಕೆ ಮಾಡಿ, ಕರ್ನಾಟಕದ ಜನ ಸಾಮಾನ್ಯರನ್ನು ಏಪ್ರಿಲ್ ಫೂಲ್ ಮಾಡಿದಂತಿದೆ.
ಸ್ವಲ್ಪ ದಿನಗಳ ಹಿಂದೆ, ಬಸ್ ಪ್ರಯಾಣ ದರ, ಮೆಟ್ರೋ ಪ್ರಯಾಣ ದರ ಏರಿಸಿದ್ದ ರಾಜ್ಯ ಸರಕಾರ, ಅದಾದ ನಂತರ ಹಾಲು, ವಿದ್ಯುತ್ ದರ ಏರಿಸಿತ್ತು. ಇಷ್ಟಕ್ಕೆ ನಿಲ್ಲದ ದರ ಏರಿಕೆಯ ಬಿಸಿ ಪುನಃ ಡೀಸೆಲ್ ಬೆಲೆ ಏರಿಕೆ ಪ್ರತಿ ಲೀಟರ್ ಗೆ 2 ರೂ. ಏರಿಸುವ ಮೂಲಕ ಯುಗಾದಿ ಹಬ್ಬಕ್ಕೆ ಬಂಪರ್ ಶಾಕ್ ಕೊಟ್ಟಿದ್ದಾರೆ.
ಪರಿಷ್ಕೃತ ದರ ಏಪ್ರಿಲ್ 1 ರ ಮದ್ಯ ರಾತ್ರಿಯಿಂದ ಜಾರಿ
ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ಗೆ 88.93 ರೂಪಾಯಿ ದರವಿದೆ. ಆದರೆ ನಾಳೆಯಿಂದ ತೆರಿಗೆ ಏರಿಕೆಯಿಂದಾಗಿ ದರ 90.93 ರೂಪಾಯಿಯಷ್ಟು ಹೆಚ್ಚಾಗಲಿದೆ. ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44% ರಿಂದ 21.17 % ಗೆ ಇದೀಗ ರಾಜ್ಯ ಸರ್ಕಾರ ಏರಿಕೆ ಮಾಡಿರುವುದರ ಪರಿಣಾಮ ಈ ಬೆಲೆ ಏರಿಕೆಗೆ ಕಾರಣವಾಗಿದೆ.
ಹಾಲು, ಮೊಸರು ರೂ. 4 ಏರಿಕೆ
ಹಾಲಿನ ಮತ್ತು ಮೊಸರಿನ ಬೆಲೆ ಇಂದು ರೂ. 4 ಏರಿಕೆ ಆಗಿದೆ. ಹಾಲು ಮತ್ತು ಮೊಸರಿಗೆ ಸಂಬಂಧಪಟ್ಟ ಉತ್ಪನಗಳ ಬೆಲೆ ಏರಿಕೆಯ ಬಿಸಿ ಆದಷ್ಟು ಬೇಗ ಕರ್ನಾಟಕದ ಜನತೆಗೆ ತಟ್ಟಲಿದೆ.
ಟೋಲ್ ದರದಲ್ಲೂ ಇಂದಿನಿಂದ ಹೆಚ್ಚಳ
ಟೋಲ್ ದರವೂ ಶೇ 3 ರಿಂದ ಶೇ 5 ರಷ್ಟು ಹೆಚ್ಚಳ. ಇನ್ನು ಹೆದ್ದಾರಿ ಪ್ರಾಧಿಕಾರ ಕೂಡ ಟೋಲ್ ದರವನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಳ ಮಾಡುತ್ತಿದ್ದು, ಇಂದಿನಿಂದಲೇ ಜಾರಿಗೆ ಬರುತ್ತಿದೆ. ಜನರಿಗೆ ಬೆಲೆ ಏರಿಕೆ ಬಿಸಿ ಮತ್ತಷ್ಟು ತಟ್ಟಲಿದೆ.
ವಿದ್ಯುತ್ ದರ ಏರಿಕೆ
ವಿದ್ಯುತ್ ದರ ಪ್ರತಿ ಯುನಿಟಿಗೆ 36 ಪೈಸೆ ಏರಿಸಿದ ಪರಿಣಾಮ ಮತ್ತು ಮಾಸಿಕ ಶುಲ್ಕ 20 ರೂ. ಹೆಚ್ಚಾಗಿರುವ ಕಾರಣ , ವಿದ್ಯುತನ್ನು ಅವಲಂಬಿಸಿಕೊಂಡಿರುವ ಉತ್ಪನ್ನಗಳ ಬೆಲೆ ಏರಿಕೆಯ ಸಾಧ್ಯತೆ ಕೂಡ ಹೆಚ್ಚಿದೆ. 120 ರೂ. ಇದ್ದ ವಿದ್ಯುತ್ ಮಾಸಿಕ ಶುಲ್ಕ, 140 ರೂ. ಗೆ ಹೆಚ್ಚಳವಾಗಿದೆ.
ಈ ಎಲ್ಲಾ ಬೆಲೆ ಏರಿಕೆಯಿಂದ ರಾಜ್ಯದ ಜನರ ಪರಿಸ್ಥಿತಿ ಹೇಗೆ ಇರಲಿದೆಯೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಆದರೆ ಈ ರೀತಿಯ ಬೆಲೆ ಏರಿಕೆಯಿಂದ ರಾಜ್ಯದ ಜನತೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ಸ್ವರೂಪಕ್ಕೆ ತಿರುಗುತ್ತದೆಯೋ ಕಾದು ನೋಡಬೇಕಾಗಿದೆ.