Bantwal : ಇತ್ತೀಚಿನ ದಿನಗಳಲ್ಲಿ ಹವಾಮಾನ ಪರಿಸ್ಥಿಗಳಲ್ಲಿನ ತೀವ್ರ ಬದಲಾವಣೆ ಆರೋಗ್ಯದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತಿದೆ. ಫೆಬ್ರವರಿ ಸಾಮಾನ್ಯವಾಗಿ ಶೀತ ತಿಂಗಳು ಆದರೆ ಅನಿರೀಕ್ಷಿತ ಶಾಖ ಹೆಚ್ಚಾಗುವುದರಿಂದ ಜನರ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಈ ರೀತಿಯ ಶೀತ ಹವಾಮಾನದಿಂದ ಬಿಸಿ ವಾತಾವರಣದ ಪಲ್ಲಟದಿಂದ ಋತುಮಾನದ ಖಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಕೆಮ್ಮು, ನೆಗಡಿ, ಜ್ವರ, ಗಂಟಲು ಸೋಂಕು, ಚರ್ಮ ರೋಗ ಹೀಗೆ ಇನ್ನಿತರ ಖಾಯಿಲೆಗಳು ಕಾಣಿಸುತ್ತಿದೆ. ಮಕ್ಕಳು ಅದರಲ್ಲೂ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತಿರುವುದು ತಲೆ ಕೆಡಿಸುವ ಸಂಗತಿ. ಈಗಾಗಲೇ ಜಿಲ್ಲೆಯ ಕೆಲ ಶಾಲೆಗಳು ಅನಾರೋಗ್ಯದ ಮಕ್ಕಳನ್ನು ಕಳುಹಿಸದಂತೆ ಪೋಷಕರಿಗೆ ಸೂಚಿಸಿದ್ದಾರಂತೆ.
ಜ್ವರ ಪ್ರಕರಣಗಳು ಮತ್ತು ಸಾಂಕ್ರಾಮಿಕ ರೋಗಗಳ ಮೇಲ್ವಿಚಾರಣೆ ಮಾಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಸಮೀಕ್ಷೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಶಾ ಸ್ವಯಂ ಸೇವಕರು, ಮಲೇರಿಯಾ ನಿಯಂತ್ರಣ ಸಿಬ್ಬಂದಿ, ಅರೋಗ್ಯ ರಕ್ಷಣಾ ಅಧಿಕಾರಿಗಳು ಮತ್ತು ಅರೋಗ್ಯ ಕಾರ್ಯಕರ್ತರು ರೋಗ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲು ಮತ್ತು ಪರೀಕ್ಷಿಸಲು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಸಾಮಾನ್ಯ ಜ್ವರ ಮತ್ತು ವೈರಲ್ ಸೋಂಕುಗಳು ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವುದರಿಂದ, ಇದರ ಹರಡುವಿಕೆಯನ್ನು ತಡೆಗಟ್ಟಲು ಎಚ್ಚರಿಗೆ ಮತ್ತು ತಡೆಗಟ್ಟುವ ವಿಧಾನಗಳನ್ನು ಅನುಸರಿಸಬೇಕೆಂದು ವೈದ್ಯರುಗಳು ಒತ್ತಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ನೀಗ ವಹಿಸಿಬೇಕಾಗಿದೆ.