ಪೋಲೀಸರ ಮಾಸ್ಕ್ ಧರಿಸಿದ್ದ ದರೋಡೆಕೋರ! ಬೋಳಂತೂರು ದರೋಡೆ ಪ್ರಕರಣದಿಂದ ಎಎಸ್ಐ ಶಫೀರ್ ಬಾಬುವಿನ ಶಂಕಿತ ಅಪರಾಧಗಳ ಪಟ್ಟಿ ಬೆಳಕಿಗೆ..!
Bantwal : ಬಂಟ್ವಾಳ ತಾಲೂಕು ಬೋಳಂತೂರಿನ ನಾರ್ಶದ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಪೊಲೀಸ್ ಎಎಸ್ಐ ಶಫೀರ್ ಬಾಬುನ ಒಂದೊಂದು ಕಳ್ಳತನದ ಪ್ರಕರಣಗಳು ಬಯಲಿಗೆ ಬರುತ್ತಿದೆ. ತನ್ನ ಐಷಾರಾಮಿ ಜೀವನಕ್ಕೆ ಕಳ್ಳತನ ಹಾದಿ ಇಡಿದಿದ್ದ ಶಫೀರ್ ಬಾಬು ಸಿನಿಮಾ ರೀತಿಯಲ್ಲಿ ಸುಲೈಮಾನ್ ಹಾಜಿಯವರ ಮನೆಯಲ್ಲಿ ದರೋಡೆ ಮಾಡಿದ್ದ.
ಬೊಳಂತೂರಿನ ಪ್ರಕರಣದಿಂದ ಎಚ್ಚೆತ್ತ ಕೇರಳ ಪೊಲೀಸರು ಈತನ ವಿರುದ್ಧದ ಇತರ ಪ್ರಕರಣದ ಬಗ್ಗೆ ಗಮನ ಹರಿಸಿದಂತಿದೆ. 2016 ರ ಫೆಬ್ರವರಿಯಲ್ಲಿ ಹಲ್ಲೆ ಪ್ರಕರಣ ಆರೋಪಿ ಚಚೂರಿನ ಶ್ರೀಜಿತ್ ಮನೆಗೆ ಶಫೀರ್ ಬಾಬು ಮತ್ತು ತಂಡ ದಾಳಿ ನಡೆಸಿತ್ತು. ಈ ದಾಳಿ ಸಂದರ್ಭದಲ್ಲಿ ಲಾಕರ್ ಒಡೆದು 18 ಗ್ರಾಂ.ತೂಕದ ನವರತ್ನದ ಉಂಗುರ ಶ್ರೀಜಿತ್ ಮನೆಯಿಂದ ಕಳವಾಗಿತ್ತು.
ಈ ದಾಳಿ ಸಂದರ್ಭದಲ್ಲಿ ಆರೋಪಿ ಶ್ರೀಜಿತ್ ಮತ್ತು ಆತನ ಪತ್ನಿ ಮನೆಯಲ್ಲಿ ಇರಲಿಲ್ಲವಂತೆ. ಮನೆಯಲ್ಲಿ ಶ್ರೀಜಿತ್ ತಾಯಿ ಮಾತ್ರ ಇದ್ದಿದ್ದು, ಆ ಸಮಯ ನೋಡಿ ಶಫೀರ್ ಮತ್ತು ತಂಡ ಯಾವುದೇ ನೋಟೀಸ್ ಕೊಡದೆ ದಾಳಿ ನಡೆಸಿತ್ತು. ಆದರೆ ಸ್ವಲ್ಪ ದಿನಗಳ ನಂತರ ಶ್ರೀಜಿತ್ ಮತ್ತು ಆತನ ಪತ್ನಿ ಮರಳಿ ಬಂದಾಗ ಮನೆಯಲ್ಲಿದ್ದ 18 ಗ್ರಾಂ. ತೂಕದ ನವರತ್ನದ ಉಂಗುರ ಕಾಣೆಯಾಗಿತ್ತು.
ಸದ್ಯಕ್ಕೆ ಬಂಧನದಲ್ಲಿರುವ ಎಎಸ್ಐ ಶಫೀರ್ ಬಾಬುವನ್ನು ಕೇರಳ ಪೊಲೀಸ್ ಇಲಾಖೆ ಕೆಲಸದಿಂದ ವಜಾ ಗೊಳಿಸಿದೆ. ಪ್ರಸ್ತುತ ಪ್ರಕರಣದ ವಿಚಾರಣೆ ಕೇರಳದ ಮ್ಯಾಜಿಸ್ಟ್ರೇಟ್ ವಿಚಾರಣೆಯ ಹಂತದಲ್ಲಿದ್ದು, ಫೆ.10 ರಂದು ನಡೆಯಬೇಕಿದ್ದ ವಿಚಾರಣೆಯು ಮಾರ್ಚ್ 26 ಕ್ಕೆ ಮುಂದೂಡಲಾಗಿದೆ. ಶಫೀರ್ ಬಾಬುವಿನ ಹಿಂದಿನ ಪ್ರಕರಣಗಳ ತನಿಖೆ ನಡೆದ ನಂತರವೇ ಆತನ ಹಿಂದಿನ ಪ್ರಕರಣಗಳು ಬಯಲಾಗಲಿದೆ.