ಉಳ್ಳಾಲ: ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆ ಸಮೀಪ ಬುಧವಾರ ಸಂಭವಿಸಿದ ಘಟನೆಯಲ್ಲಿ ಖಾಸಗಿ ಬಸ್ ಚಾಲಕರ ಆರೋಗ್ಯ ಸಮಸ್ಯೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.
ಗೋಪಾಲಕೃಷ್ಣ ಖಾಸಗಿ ಬಸ್ನ ಚಾಲಕ ಜನಾರ್ದನ ಅವರು ಬಸ್ ಚಲಾಯಿಸುತ್ತಿದ್ದ ವೇಳೆ ಏಕಾಏಕಿ ರಕ್ತದೊತ್ತಡ (ಬಿಪಿ) ತೀವ್ರವಾಗಿ ಕುಸಿದ ಪರಿಣಾಮ ಅಸ್ವಸ್ಥಗೊಂಡು ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರ ಪರಿಣಾಮ ಬಸ್ ರಸ್ತೆ ಡಿವೈಡರ್ ಏರಿ ನಿಂತಿದೆ.
ಅದೃಷ್ಟವಶಾತ್ ಘಟನೆ ನಡೆದ ಸಂದರ್ಭದಲ್ಲಿ ಬಸ್ನ ಮುಂಭಾಗದಲ್ಲಿ ಯಾವುದೇ ವಾಹನಗಳು ಅಥವಾ ಪಾದಚಾರಿಗಳು ಇರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಸ್ವಸ್ಥಗೊಂಡ ಚಾಲಕ ಜನಾರ್ದನ ಅವರನ್ನು ತಕ್ಷಣ ಸಮೀಪದ ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತ ಕಾರಣ ಹೆಚ್ಚಿನ ಅನಾಹುತ ತಪ್ಪಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.





