ಬಂಟ್ವಾಳ, ಕಲ್ಲಡ್ಕ, ಏಪ್ರಿಲ್ 29: ಪೆರಿಯಶಾಂತಿಯಿಂದ ಬಿ.ಸಿ ರೋಡ್ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಇನ್ನು ಸ್ವಲ್ಪ ತಿಂಗಳುಗಳ ನಂತರ ಮಂಗಳೂರು - ಬೆಂಗಳೂರು ಪ್ರಯಾಣಿಕರಿಗೆ ವಿಸ್ತಾರವಾದ ರಸ್ತೆ ಲಭ್ಯವಾಗಲಿದೆ. ಈಗಾಗಲೇ ಪ್ರಮುಖ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಅಂತಿಮ ಪೂರ್ಣಗೊಳಿಸುವಿಕೆಯ ಹಂತದಲ್ಲಿದೆ.
ಕಲ್ಲಡ್ಕ ಪೇಟೆಗೆ ಪೆಟ್ಟು ಬಿಳಲಿದೆಯೇ ಕಲ್ಲಡ್ಕ ಮೇಲ್ಸೇತುವೆ ?
ಕಲ್ಲಡ್ಕ ಪೇಟೆ ಮುಂದಿನ ದಿನಗಳಲ್ಲಿ ದೊಡ್ಡ ವ್ಯವಹಾರ ಕೇಂದ್ರವಾಗಲಿದೆ ಎಂದು ಹೆಚ್ಚಿನ ಜನ ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಫ್ಲೈ ಓವರ್ ನಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಸ್ವಲ್ಪ ಮಟ್ಟಿಗೆ ಪೆಟ್ಟು ಬೀಳುವ ಸಾಧ್ಯತೆ ಇರಬಹುದು ಎಂದು ಹೇಳುತ್ತಾರೆ. ಆದರೆ ಕಲ್ಲಡ್ಕ ಪೇಟೆಗೆ ಹೆಚ್ಚಾಗಿ ಅಲ್ಲಿನ ಸ್ಥಳೀಯ ಕೆಲ ಗ್ರಾಮಗಳ ಜನರ ವ್ಯಾಪಾರ ವಹಿವಾಟು ಹೆಚ್ಚಾಗಿ ಇರುವುದರಿಂದ, ವ್ಯಾಪಾರಿಗಳಿಗೆ ಯಾವುದೇ ಹೊಡೆತ ಬೀಳುವ ಸನ್ನಿವೇಶ ಕಡಿಮೆ. ಒಟ್ಟಿನಲ್ಲಿ ಕಲ್ಲಡ್ಕದಲ್ಲಿ 2.1 ಕಿ.ಮೀ ಉದ್ದದ ಮೇಲ್ಸೇತುವೆ ಮತ್ತು ಅದರ ಕೆಳಗಡೆ ಇರುವ ಬೃಹತ್ತಾದ ಸರ್ವಿಸ್ ರೋಡ್ ಕಲ್ಲಡ್ಕ ಪೇಟೆಯ ಬೆಳವಣಿಗೆಗೆ ಕಾರಣವಾಗಲಿದೆ ಎನ್ನುವ ಅಭಿಪ್ರಾಯ ಹೆಚ್ಚಿನ ಜನರದ್ದಾಗಿದೆ.
ಪೆಟ್ಟು ಬೀಳುತ್ತೆ ಪಾಣೆಮಂಗಳೂರು, ಮೆಲ್ಕಾರ್ ಮತ್ತು ಮಾಣಿ ಪೇಟೆಗಳಿಗೆ ?
ಇತ್ತೀಚಿನ ದಿನಗಳಲ್ಲಿ ಕಲ್ಲಡ್ಕದ ಕೆಲ ದೂರದಲ್ಲಿ ಬೆಳೆಯುತ್ತಿದ್ದ ಪ್ರದೇಶವೆಂದರೆ ಮೆಲ್ಕಾರ್ ಪೇಟೆ. ಒಂದು ಕಡೆ ಮೆಲ್ಕಾರ್ ಬೆಳೆಯುತ್ತಿದ್ದರೆ, ಸ್ವಲ್ಪ ದೂರದಲ್ಲಿ ಪಾಣೆಮಂಗಳೂರು ಕೂಡ ಬೆಳೆದು ಇನ್ನೇನು ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟಡ ಅಂಗಡಿ ಮುಗ್ಗಟ್ಟುಗಳು ಬಂದು ದೊಡ್ಡ ಪೇಟೆಯಾಗಿ ಬೆಳೆಯುವ ಸಂದರ್ಭದಲ್ಲೇ ಫ್ಲೈ ಓವರ್ ಬಂದಿರುವುದು ಈ ಪೇಟೆಗಳ ಪ್ರಗತಿಗೆ ಬ್ರೇಕ್ ಹಾಕಿದೆ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಅನನುಕೂಲವೆಂದರೆ ಈ ಎರಡು ಪೇಟೆಗಳ ಮಧ್ಯೆ ಬಂದಿರುವ ಫ್ಲೈ ಓವರ್ ಪೇಟೆಯನ್ನು ಎರಡು ಇಬ್ಬಾಗ ಮಾಡಿದೆ ಮತ್ತು ಇದರಿಂದ ಒಂದು ಭಾಗದ ಜನರಿಗೆ ಮತ್ತೊಂದು ಭಾಗ ನೇರವಾಗಿ ಕಾಣದಿರುವುದು. ಮಾಣಿ ಭಾಗದಲ್ಲೂ ಇದೆ ರೀತಿಯ ಫ್ಲೈ ಓವರ್ ಬಂದಿರುವುದು ಇಲ್ಲಿಯೂ ಸಹ ಪೇಟೆಯ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಸಾರ್ವಜನಿಕರು.
ಚತುಷ್ಪಥ ರಸ್ತೆ ಬೆಂಗಳೂರು ಮಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ
ಮಂಗಳೂರು-ಬೆಂಗಳೂರು ಪ್ರಯಾಣಿಕರಿಗೆ ಪೆರಿಯಶಾಂತಿಯಿಂದ ಬಿ ಸಿ ರೋಡ್ ವರೆಗೆ ಬರಲಿರುವ ಚತುಷ್ಪಥ ರಸ್ತೆ ಸಿಹಿ ಸುದ್ದಿಯನ್ನು ನೀಡಲಿದೆ. ಪ್ರಯಾಣದ ಸಮಯ ಕೂಡ ಕಡಿಮೆಯಾಗಲಿದೆ ಮತ್ತು ಪ್ರಯಾಣ ಸುಗಮವಾಗಲಿದೆ. ಮುಂದಿನ ವರ್ಷ ಈ ಕಾಮಗಾರಿ ಸಂಪೂರ್ಣಗೊಂಡು ಸಾರ್ವಜನಿಕರಿಗೆ ಬಿಟ್ಟುಕೊಡುವ ಯೋಜನೆಯಲ್ಲಿದ್ದಾರೆ ಕೇಂದ್ರ ಸರಕಾರ ಮತ್ತು ಸಾರಿಗೆ ಇಲಾಖೆ.