ಚಾರ್ಮಾಡಿ, ಏಪ್ರಿಲ್ 30: ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಬರುವ ಚಾರ್ಮಾಡಿ ಘಾಟಿ ವಿಸ್ತರಣೆಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ. ಚಾರ್ಮಾಡಿ ಘಾಟಿ ಹೆದ್ದಾರಿ ಒಟ್ಟು 25 ಕಿ.ಮೀ. ವ್ಯಾಪ್ತಿಸಿದ್ದು, ಇದರಲ್ಲಿ 11 ಕಿ.ಮೀ. ದಕ್ಷಿಣ ಕನ್ನಡ ಜಿಲ್ಲೆಗೆ, 14 ಕಿ.ಮೀ. ಚಿಕ್ಕಮಗಳೂರು ಭಾಗಕ್ಕೆ ಸೇರುತ್ತದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಭಾಗವಾದ ಚಾರ್ಮಾಡಿ ಘಾಟಿಯ ವಿಸ್ತರಣೆ ಕಾಮಗಾರಿಗೆ ಅರಣ್ಯ ಇಲಾಖೆ ಸಮ್ಮತಿ ನೀಡಿದೆ. ಮರಗಳ ತೆರವು ಗೊಳಿಸಲು ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ ಮಳೆಗಾಲ ಕಳೆದ ಕೂಡಲೇ ಚಾರ್ಮಾಡಿ ಹೆದ್ದಾರಿ ವಿಸ್ತರಣೆ ಕಾರ್ಯ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಒಂದು ವರ್ಷಕ್ಕೆ ರಸ್ತೆ ಬಂದ್ ಆಗುವ ಸಾಧ್ಯತೆ
ಈ ಹಿಂದೆ 1984ರಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಆ ಸಂದರ್ಭದಲ್ಲೂ ಚಾರ್ಮಾಡಿ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು ಮತ್ತು ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು . ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣೆ ತೀರಾ ಕಷ್ಟಕರವಾಗಿದ್ದು, ಕನಿಷ್ಠ 1 ವರ್ಷಗಳ ವರೆಗೆ ಹೆದ್ದಾರಿ ಸಂಚಾರ ಬಂದ್ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ವರದಿಯಾಗಿದೆ. ಎಸ್ಎಲ್ವಿ ಅರ್ಥ್ ಮೂವರ್ಸ್ ಕನ್ಸ್ಟ್ರಕ್ಷನ್ ಕಂಪನಿ 141 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ವಹಿಸಲಾಗಿದೆ.