ಮಂಗಳೂರು, ಏಪ್ರಿಲ್ 30 : ಆತ ಭಕ್ತಿಯಿಂದಲೇ ಕೊರಗಜ್ಜ ಕಟ್ಟೆಗೆ ಬರುತ್ತಾನೆ, ಕೊರಗಜ್ಜ ದೈವದೆದುರು ಭಕ್ತಿಯಿಂದ ಪ್ರಾರ್ಥನೆ ಕೂಡ ಮಾಡುತ್ತಾನೆ, ಸಾಲದಕ್ಕೆ ಕಟ್ಟೆಯ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಕೂಡ ಹಾಕುತ್ತಾನೆ, ಆದರೆ ಆಮೇಲೆ ಮಾಡೋದು ಮಾತ್ರ ಯಾರು ನಂಬಲಸಾಧ್ಯವಾದ ಕೆಲಸ.
ಹೌದು, ಮಂಗಳೂರಿನ ಹೊರವಲಯದ ಏರ್ ಪೋರ್ಟ್ ರಸ್ತೆಯಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಭಕ್ತನ ವೇಷದಲ್ಲಿ ಬಂದು, ಕಟ್ಟೆಯಲ್ಲಿದ್ದ ಕಾಣಿಕೆ ಹುಂಡಿಯನ್ನು ಎಗರಿಸಿದ ಘಟನೆ ನಡೆದಿದೆ. ಕಳ್ಳತನದ ಆ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಏ.29ರ ಮಂಗಳವಾರ 5.30ರ ಸುಮಾರಿಗೆ ಕಳ್ಳನೊಬ್ಬ ಕೊರಗಜ್ಜನ ಕಾಣಿಕೆ ಡಬ್ಬವನ್ನು ಕದ್ದೊಯಿದಿದ್ದಾನೆ. ವಾಹನ ದಟ್ಟವಾಗಿ ಸಂಚರಿಸುವ ರಸ್ತೆಯ ಪಕ್ಕದಲ್ಲೇ ಇರುವ ಕೊರಗಜ್ಜ ದೈವದ ಕಟ್ಟೆಯಲ್ಲಿ ನಡೆದ ಕಳ್ಳತನದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳ ಭಕ್ತನ ರೀತಿಯಲ್ಲಿ ಬಂದು ಕಟ್ಟೆಗೆ ಪ್ರದಕ್ಷಿಣೆ ಹಾಕಿ, ದೇವರಿಗೆ ಭಕ್ತಿಯಿಂದ ಕೈ ಮುಗಿದು ಸುತ್ತಮುತ್ತಲು ಯಾರು ಇಲ್ಲದನ್ನು ದೃಡೀಕರಿಸಿ ಆಮೇಲೆ ಕಾಣಿಕೆ ಡಬ್ಬವನ್ನು ಎತ್ತುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.