21 June 2025 | Join group

ಸುಹಾಸ್ ಶೆಟ್ಟಿ ಕೊ*ಲೆ, ವಿಹಿಂಪ ಬಂದ್ ಗೆ ಕರೆ, ಬಸ್ ಸಂಚಾರ ಸ್ಥಗಿತ

  • 02 May 2025 09:10:04 AM

ಮಂಗಳೂರು, ಮೇ 02 : ನಿನ್ನೆ ಬಜ್ಪೆಯಲ್ಲಿ ದುಷ್ಕರ್ಮಿಗಳಿಂದ ನಡೆದ ಸುಹಾಸ್ ಶೆಟ್ಟಿ ಮರ್ಡರ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಯಲ್ಲಿದೆ. ವಿಶ್ವ ಹಿಂದೂ ಪರಿಷದ್ ಶುಕ್ರವಾರ ಬಂದ್ ಗೆ ಕರೆ ನೀಡಿದೆ.

 

ಬೆಂಗಳೂರಿನಿಂದ ಬಂದ ನಾಲ್ಕು ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ನಂತರ, ಕೆಎಸ್‌ಆರ್‌ಟಿಸಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ.

 

ಏತನ್ಮಧ್ಯೆ, ಎಂದಿನಂತೆ ಶುಕ್ರವಾರ ಬೆಳಗ್ಗೆ ಖಾಸಗಿ ಬಸ್ ಗಳು ಮಂಗಳೂರಿನಲ್ಲಿ ಸಂಚಾರ ಶುರು ಮಾಡಿದ್ದರು. ಆದರೆ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜು ಬಳಿ ಬಸ್ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ.

 

ಪಂಪ್‌ವೆಲ್ ಬಳಿ ಕಲ್ಲು ತೂರಾಟ ನಡೆದಿದ್ದು, ನಾಲ್ಕು ಬಸ್‌ಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ದಾಳಿಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಕಲ್ಲು ತೂರಾಟದ ಘಟನೆಯ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಖಾಸಗಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

 

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಆರ್‌ಟಿಸಿ, ಬಸ್ ಸೇವೆಗಳನ್ನು ಕೂಡ ಸ್ಥಗಿತಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅನವಶ್ಯಕ ಪ್ರಯಾಣ ನಡೆಸುವುದು ಸರಿಯಲ್ಲ ಎಂದು ಕೆಲ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

 

ನಗರದಲ್ಲಿ ಹೆಚ್ಚಿನ ವಾಣಿಜ್ಯ ಸಂಸ್ಥೆಗಳು ಮುಚ್ಚಲ್ಪಟ್ಟಿದೆ ಮತ್ತು ಸಾರ್ವಜನಿಕ ಸಂಚಾರ ವಿರಳವಾಗಿದೆ. ಪಾದಚಾರಿಗಳು ಮತ್ತು ವಾಹನಗಳ ಸಂಚಾರ ಕಡಿಮೆ ಇದ್ದ ರಸ್ತೆಗಳು ನಿರ್ಜನವಾಗಿದೆ ಎಂದು ತಿಳಿದು ಬಂದಿದೆ.