ಡಾಕಾ, ಮೇ 03 : ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ದಾಳಿ ಮಾಡಲು ಭಾರತ ತಯಾರು ನಡೆಸುತ್ತಿರುವ ಸಂದರ್ಭದಲ್ಲಿ ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರ ಸಹಾಯಕ ಹಾಗೂ ಬಾಂಗ್ಲಾದೇಶದ ಮಾಜಿ ಜನರಲ್ ಫಜ್ಲುರ್ ರೆಹಮಾನ್ ಹೇಳಿಕೆ ಬಾಂಗ್ಲಾದೇಶವನ್ನು ಪೇಚಿಗೆ ಸಿಲುಕಿಸಿದೆ.
ಫಜ್ಲುರ್ ರೆಹಮಾನ್ ತನ್ನ ಫೇಸ್ ಬುಕ್ ಪೋಸ್ಟಿನಲ್ಲಿ "ಭಾರತ ಒಂದುವೇಳೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಬಾಂಗ್ಲಾದೇಶ ಚೀನಾದ ಜೊತೆ ಕೈಜೋಡಿಸಿ ಈಶಾನ್ಯ ಭಾರತದ 7 ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು” ಎಂದು ಬರೆದಿದ್ದಾನೆ. ಆದರೆ ಬಾಂಗ್ಲಾದೇಶದ ಮಧ್ಯಂತರ ಸರಕಾರ ಇವರ ಹೇಳಿಕೆಯಿಂದ ದೂರ ಉಳಿದಿದೆ.
ಬಾಂಗ್ಲಾದೇಶ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಈ ಮೊದಲು ಚೀನಾದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿ ಪೇಚಿಗೆ ಸಿಲುಕಿಕೊಂಡಿದ್ದರು. ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತೀಕಾರ ತೀರಿಸಿಕೊಂಡರೆ, ‘ಸೆವೆನ್ ಸಿಸ್ಟರ್ಸ್’ ಎಂದೂ ಕರೆಯಲ್ಪಡುವ ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಲು ಚೀನಾದೊಂದಿಗೆ ಕೈ ಜೋಡಿಸಬೇಕು ಎಂದು ಮಾಜಿ ಬಾಂಗ್ಲಾದೇಶದ ಮಿಲಿಟರಿ ಅಧಿಕಾರಿ ರೆಹಮಾನ್ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಇವರ ಹೇಳಿಕೆಯಿಂದ ಬಾಂಗ್ಲಾದೇಶಕ್ಕೆ ಮಾತ್ರ ಹೆದರಿಕೆ ಹುಟ್ಟಿದಂತಿದೆ. ಬಾಂಗ್ಲಾದೇಶ ಸರಕಾರ ಈ ವಿವಾದಿತ ಹೇಳಿಕೆಯಿಂದ ದೂರ ಉಳಿದಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪತ್ರಿಕಾಗೋಷ್ಠಿಯಲ್ಲಿ ರೆಹಮಾನ್ ರವರ ಹೇಳಿಕೆಗೂ ಮತ್ತು ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ, ಅದು ಅವರ ವ್ಯಯಕ್ತಿಕ ಅಭಿಪ್ರಾಯ ಎಂದು ಹೇಳಿ ವಿವಾದದಿಂದ ಜಾರಿಕೊಂಡಿದೆ.