ಮಂಗಳೂರು, ಮೇ 04 : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಜ್ಪೆಯಲ್ಲಿ ಮೇ 01 ರಂದು ನಡೆದ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣದ ಪರಿಶೀಲನೆಗೆ ಬಂದ ರಾಜ್ಯದ ಗೃಹ ಮಂತ್ರಿ ಜಿ. ಪರಮೇಶ್ವರ್ ಕೇವಲ ಮುಸ್ಲಿಂ ಮುಖಂಡರ ಅಭಿಪ್ರಾಯವನ್ನು ಮಾತ್ರ ಪಡೆದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಆರೋಪ ಮಾಡಿದೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮುಖಂಡರು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ "ಗೃಹ ಮಂತ್ರಿಗಳು ಕೇವಲ ಮುಸ್ಲಿಂ ಮುಖಂಡರುಗಳ ಅಭಿಪ್ರಾಯವನ್ನು ಪಡೆದರೆ ಹೊರತು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಅಭಿಪ್ರಾಯಗಳನ್ನು ಪಡೆದಿಲ್ಲ. ಇಂತಹ ಸಂದರ್ಭದಲ್ಲಿ ಈ ತನಿಖೆಯಲ್ಲಿ ನ್ಯಾಯ ಸಿಗಬಹುದಾ" ಎಂದು ಪ್ರಶ್ನಿಸಿದರು.
'ಗೃಹ ಸಚಿವರು ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಮಾಡುವುದರ ಬಗ್ಗೆ ಮಾತನಾಡಿ, ಅವರು ಹಿಂದೂ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಮಾಡುತ್ತಿದ್ದಾರೆ ಎಂದು ನಮಗೆ ಅನಿಸುತ್ತಿದೆ. ಗೃಹ ಸಚಿವರು ಶಾಂತಿಯ ವಾತಾವರಣ ಬಿಟ್ಟು ಅಶಾಂತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ' ಎಂದು ಸತೀಶ್ ಕುಂಪಲ ಆರೋಪ ಮಾಡಿದ್ದಾರೆ.
'ಸ್ಪೀಕರ್ ಯು ಟಿ ಖಾದರ್ ಎಲ್ಲರಿಗೂ ನ್ಯಾಯ ದೊರಕಿಸಿ ಕೊಡಬಹುದು ಎನ್ನುವ ನಿರೀಕ್ಷೆ ಇತ್ತು ಆದರೆ ಅವರು ಫಾಝಿಲ್ ಕುಟುಂಬ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನುವ ತೀರ್ಪು ಆಗಲೇ ನೀಡಿಯಾಗಿದೆ ಎಂದರು. ಆದರೆ ಫಾಝಿಲ್ ಸಹೋದರ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಈಗಾಗಲೇ ಬಂಧಿಸಲಾಗಿದೆ. ಕಾನೂನು ಇವರ ಕೈಯಲ್ಲೇ ಇದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಯು. ಟಿ ಖಾದರ್ ರವರ ಜಿಹಾದಿ ಬಣ್ಣ ಬಯಲಾಗಿದೆ' ಎಂದು ಕಳವಳ ವ್ಯಕಪಡಿಸಿದ ಸತೀಶ್ ಕುಂಪಲ, ಈ ತನಿಖೆಯನ್ನು ಎನ್ಐಎ ಗೆ ಒಪ್ಪಿಸಬೇಕಾಗಾಗಿ ಸರಕಾರಕ್ಕೆ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ದ.ಕ ಸಂಸದರಾದ ಕ್ಯಾ. ಬೃಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ್ ಪೂಂಜಾ ಇನ್ನಿತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಫಾಝಿಲ್ ಸಹೋದರ ಸುಹಾಸ್ ಹ*ತ್ಯೆಯ ಪ್ರಮುಖ ರೂವಾರಿ: ಪೊಲೀಸರಿಂದ ಬಂಧನ