ಮಂಗಳೂರು: ಅಮೇರಿಕಾದಲ್ಲಿ ಉದ್ಯಮಿಯಾಗಿರುವ ಶಾರದಾ ಪ್ರಸಾದ್ ಮತ್ತು ಅವರ ಧರ್ಮಪತ್ನಿ ನಳಿನಿ ಪ್ರಸಾದ್ ಯಕ್ಷದ್ರುವ ಪಟ್ಲ ಫೌಂಡೇಶನ್ ಗೆ 1.25 ಕೋಟಿ ದೇಣಿಗೆ ನೀಡಿ, ಯಕ್ಷಗಾನದ ಪ್ರತಿ ಅವರಿಗೆ ಇರುವ ಅಪಾರ ಪ್ರೀತಿಯನ್ನು ತೋರಿಸಿಕೊಂಡಿದ್ದು ಅಲ್ಲದೆ ಯಕ್ಷಗಾನ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿದ ಬಹು ದೊಡ್ಡ ಉದಾರ ಸೇವೆಯಾಗಿದೆ.
ಪಟ್ಲ ಸತೀಶ್ ಶೆಟ್ಟಿ ಅವರಿಂದ ಸ್ಥಾಪನೆಯಾದ ಈ ಸಂಸ್ಥೆ, 2015 ರಿಂದ ಕಲಾವಿದರಿಗೆ ಹಣಕಾಸಿನ ನೆರವು ಮತ್ತು ಸ್ವಾಲಂಬನೆಯನ್ನು ಉತ್ತೇಜಿಸುವುದು, ಉತ್ಸಾಹಿಗಳಿಗೆ ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಗಾರಗಳನ್ನು ನಡೆಸುವುದು ಇದರ ಮುಖ್ಯ ಧ್ಯೇಯವಾಗಿದೆ.
ಶಾರದಾ ಪ್ರಸಾದ್ ಮತ್ತು ದಂಪತಿ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕ್ಷೇತ್ರದ ಭಕ್ತರಾಗಿದ್ದು ಮತ್ತು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಯಾಗಿರುವ ಅವರುಗಳು, ಪಟ್ಲ ಸತೀಶ್ ಶೆಟ್ಟಿಯವರ ಮನೆ ಗೃಹಪ್ರವೇಶದಂದು ಈ ದೇಣಿಗೆಯನ್ನು ಕಾಣಿಕೆಯಾಗಿ ನೀಡಿದರು.
ಅದೇ ದಿನ ಸಂಜೆ ಕೊಡುಗೈ ದಾನಿಗಳನ್ನು ಅವರ ಔದಾರ್ಯಕ್ಕಾಗಿ ಗೌರವಿಸಲಾಯಿತು ಮತ್ತು ಪಾವಂಜೆ ಯಕ್ಷಗಾನ ತಂಡದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕ್ಷೇತ್ರದ ಆಡಳಿತ ಟ್ರಸ್ಟಿ ಶಶೀಂದ್ರ ಕುಮಾರ್ ಮತ್ತು ಪಟ್ಲ ಫೌಂಡೇಶನ್ ಪದಾಧಿಕಾರಿಗಳಾದ ಪಟ್ಲಗುತ್ತು ಮಹಾಬಲ ಶೆಟ್ಟಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡಿ ಸೌಲಭ್ಯ ವಂಚಿತರಿಗೆ ಆಶರೆ ಆಗಿರುವ ಪಟ್ಲ ಫೌಂಡೇಶನ್ ಇಲ್ಲಿಯವರೆಗೆ 12 ಕೋಟಿ ಕಲಾವಿದರ ಕಲ್ಯಾಣ ಯೋಜನೆ,5000 ಕಲಾವಿದರಿಗೆ ಇನ್ಶೂರೆನ್ಸ್ ಸೌಲಭ್ಯ, 35 ಮನೆಗಳನ್ನು ಅರ್ಹ ಕಲಾವಿದರಿಗೆ ಯಕ್ಷಾಶ್ರಯದಡಿಯಲ್ಲಿ ನಿರ್ಮಿಸಿ ಕೊಡಲಾಗಿದೆ ಹಾಗೂ 3500 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಉಚಿತ ಯಕ್ಷಗಾನ ತರಬೇತಿ ನೀಡಲಾಗುವುದು. ಈ ಎಲ್ಲಾ ಸಾಧನೆಗಳನ್ನು ಪಟ್ಲ ಫೌಂಡೇಶನ್ ಅದರ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ತುಳುನಾಡಿನ ಗಂಡು ಕಲೆ ಯಕ್ಷಗಾನವನ್ನು ಉಳಿಸುವ ಮತ್ತು ಬೆಳೆಸುವ ಉದ್ದೇಶದಿಂದ ಶ್ರೀ ಶಾರದಾ ಪ್ರಸಾದ್ ಹಾಗೂ ನಳಿನಿ ಪ್ರಸಾದ್ ರವರ ಈ ಅಪಾರ ಮೊತ್ತದ ದೇಣಿಗೆ ತುಳುನಾಡಿನ ಜನಮಾನಸದಲ್ಲಿ ದೊಡ್ಡ ಮೆಚ್ಚುಗೆಯನ್ನು ಗಳಿಸಿದೆ.ಪಟ್ಲ ಫೌಂಡೇಶನ್ ತನ್ನ ಶಾಖೆಗಳನ್ನು ಭಾರತದ ಪ್ರಮುಖ ನಗರಗಳಲ್ಲಿ ಹೊಂದಿರುವುದು ಅಲ್ಲದೆ ಯುಎಯಿ ಮತ್ತು ಅಮೇರಿಕಾ ದೇಶಗಳಲ್ಲೂ ಹೊಂದಿದೆ.