ಬಾಗಲಕೋಟೆ : ನೀ ಅಮೃತಧಾರೆ, ಕೋಟಿ ಜನುಮ ಜೊತೆಗಾತಿ...ನೀ ಅಮೃತಧಾರೆ ಇಹಕು ಪರಕು ಸಂಗಾತಿ, ನೀ ಇಲ್ಲವಾದರೆ ನಾ ಹೇಗೆ ಬಾಳಲೀ..? ಎಂದು ಹಾಡಿಕೊಂಡು ಹೊಸ ಮದುವೆಯಾಗಿ ಸುತ್ತಾಡಿಕೊಂಡು ಇರಬೇಕಾದ ದಂಪತಿ, ತಾಳಿ ಕಟ್ಟಿ ಸ್ವಲ್ಪ ನಿಮಿಷದಲ್ಲಿ ಗಂಡ ಇಹಲೋಕ ತ್ಯಜಿಸಿದರೆ ಆ ಹೆಣ್ಣುಮಗಳ ಪರಿಸ್ಥಿತಿ ಹೇಗಿರಬಹುದು...ಊಹಿಸಲು ಅಸಾದ್ಯ.!
ಹೌದು, ಈ ರೀತಿಯ ಒಂದು ಹೃದಯ ವಿದ್ರಾವಕ ಘಟನೆ ನಿಜಕ್ಕೂ ನಡೆದು ಹೋಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ ಮೇ 17 ರಂದು ಖುಷಿ ಖುಷಿಯಾಗಿ ಮದುವೆ ಮಂಟಪದಲ್ಲಿ ಪ್ರವೀಣ ಕುರ್ನೆರವರು ಪುರೋಹಿತರ ಪೂಜಾ ಕಾರ್ಯಗಳನ್ನು ನೆರವೇರಿಸಿ, ಇನ್ನೇನೋ ಸ್ವಲ್ಪದರಲ್ಲಿ ಕುಟುಂಬಸ್ಥರ ಮತ್ತು ಬಂದಿರುವ ಬಂಧುಗಳ ಆಶೀರ್ವಾದ ಪಡೆಯಬೇಕಿರುವ ಸಂದರ್ಭದಲ್ಲಿ ಈ ಮದುಮಗ ಹೃದಯಾಘಾತನಿಂದ ಮರಣ ಹೊಂದಿದ್ದಾನೆ.
ತಾಳಿ ಕಟ್ಟಿದ ನವವಧುವರರು ಆರಕ್ಷತೆಗಾಗಿ ನಿಂತಿದ್ದರು. ಕೇವಲ 2 ರಿಂದ 3 ಫೋಟೋ ಕ್ಲಿಕ್ ಮಾಡುವ ಹೊತ್ತಲ್ಲಿ ವರ ಪ್ರವೀಣ್ ಕುರ್ನೆಗೆ ಕಾಲು ನಡುಕ ಶುರುವಾಗಿತ್ತು ಮತ್ತು ಎದೆ ನೋವು ಕಾಣಿಸಿತ್ತು. ಕೂಡಲೇ ಕುಟುಂಬಸ್ಥರು ವರನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಯಿಂದ ಸಿಡಿಲು ಬಂಡಿದಂತ ಸಂದೇಶ ಬಂದಿತ್ತು ಅದೇನೆಂದರೆ ಪ್ರವೀಣ್ ನ ಮೃತ್ಯುವಿನ ಸಂದೇಶ.
ಇಡೀ ಮದುವೆ ಹಾಲ್ ಕಣ್ಣೀರಿನಿಂದ ಕೂಡಿತ್ತು. ನವ ವಧುವರರಿಗೆ ಆಶೀರ್ವಾದಿಸಲು ಬಂದ ಕುಟುಂಬಸ್ಥರು ಮತ್ತು ಬಂಧು ಬಳಗ 'ನೂರಾರು ವರುಷ ಬಾಳಿ ಎಂದು ಅಕ್ಷತೆ ಹಾಕಿ, ಹರಸಲು ಬಂದ ನಮಗೆ ಇದೆಂತ ದುಃಖದ ಸನ್ನಿವೇಶ ಎದುರಾಯಿತು' ಎಂದು ದುಃಖದಲ್ಲೇ ಹೋಗುವಂತಾಗಿದೆ. ವಧು ವರರ ಸಂತಷದ ಕ್ಷಣಗಳನ್ನು ಸಂಭ್ರಮಿಸಲಿದ್ದ ಮನೆಯವರಿಗೆ ಮತ್ತು ಕುಟುಂಬಸ್ಥರಿಗೆ ವರನ ಅಂತ್ಯಸಂಸ್ಕಾರ ಮಾಡಬೇಕಾದ ಹೃದಯವಿದ್ರಾವಕ ಸನ್ನಿವೇಶ ಬಂದೊದಗಿತ್ತು.