ಧರ್ಮಸ್ಥಳ / ಪಂಜಾಬ್ : ನಿನ್ನೆ ಮೇ 17 ರಂದು ಪಂಜಾಬಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಬೊಳಿಯೂರು ನಿವಾಸಿ 22 ವರ್ಷದ ಆಕಾಂಕ್ಷ ಎಸ್ ನಾಯರ್ ಸಾವಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಬೊಳಿಯೂರು ನಿವಾಸಿ ಸುರೇಂದ್ರ ಹಾಗೂ ಸಿಂಧೂದೇವಿ ದಂಪತಿಗಳ ಪುತ್ರಿಯಾದ ಆಕಾಂಕ್ಷ, ಪಂಜಾಬ್ನ ಎಲ್ಸಿಯ ಪಾಗ್ವಾಡ ಕಾಲೇಜಿನಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಳು.
ಕಳೆದ ಆರು ತಿಂಗಳಿನಿಂದ ದೆಹಲಿಯಲ್ಲಿ ಸ್ಪೈಸ್ ಜೆಟ್ ಏರೋಸ್ಪೇಸ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷ, ತಾನು ಕಲಿತ ಸರ್ಟಿಫಿಕೇಟ್ ಪಡೆಯಲು ಪಂಜಾಬ್ನ ಎಲ್ಸಿಯು ಪಾಗ್ವಾಡ ಕಾಲೇಜಿಗೆ ಬಂದಿದ್ದಾಳಂತೆ. ಈಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಜರ್ಮನಿಗೆ ಪ್ರಯತ್ನ ಮಾಡುತ್ತಿದ್ದ ಸಂದರ್ಭದಲ್ಲಿ ನನಗೆ ಸರ್ಟಿಫಿಕೇಟ್ ಆದಷ್ಟು ಬೇಗ ಕೊಡಿ ಎಂದು ಕಾಲೇಜಿಗೆ ಬೇಡಿಕೊಂಡಿದ್ದಳು. ಆದರೆ ಸರ್ಟಿಫಿಕೇಟ್ ಹಾಗೆ ಕಳಿಸಲು ಸಾಧ್ಯವಿಲ್ಲ, ನೀವು ಇಲ್ಲಿಗೆ ಬಂದು ಪಡೆಯಬೇಕು ಎಂಬ ಪ್ರತಿಕ್ರಿಯೆ ಕಾಲೇಜಿನಿಂದ ಬಂದ ಕಾರಣ ಆಕೆ ನಿನ್ನೆ ಕಾಲೇಜಿಗೆ ಹೋಗಿದ್ದಾಳೆ.
ಬೆಳಿಗ್ಗೆ 9 ಗಂಟೆಗೆ ಕೇರಳ ಸ್ನೇಹಿತನ ಜೊತೆ ಬೈಕ್ ನಲ್ಲಿ ಕಾಲೇಜು ತಲುಪಿದ್ದಾಳೆ, 11 ಗಂಟೆಗೆ ಪೋಷಕರು ಕರೆ ಮಾಡಿದಾಗ ಕರೆ ಕಟ್ ಮಾಡಿ ನಾನು ಕಾಲೇಜಿನಲ್ಲಿ ಇದ್ದೇನೆ ಎಂದು ಮೆಸೇಜ್ ಕಳುಹಿಸಿದ್ದಾಳಂತೆ. ಆಮೇಲೆ ಮದ್ಯಾಹ್ನ 2 ಗಂಟೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ ಮತ್ತು 4 ಗಂಟೆಗೆ ಪಂಜಾಬ್ ಪೊಲೀಸರು ನಿಮ್ಮ ಮಗಳು ಕಾಲೇಜಿನ 4 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದು ಪೋಷಕರಿಗೆ ಸಿಡುಲು ಬಡಿದಂತಾಗಿದೆ. ನನ್ನ ಮಗಳಿಗೆ ಕಾಲೇಜಿನವರೇ ಏನಾದರೂ ಮಾಡಿರುವ ಸಾಧ್ಯತೆ ಇದೆ ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರು ಹೇಳುವ ಪ್ರಕಾರ, ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಳಲ್ಲ, ಕಾಲೇಜಿನವರೇ ನಮ್ಮ ಮಗಳಿಗೆ ಏನಾದರೂ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಷ್ಠಿತ ಕನ್ನಡ ಮಾಧ್ಯಮಗಳು ಪ್ರಕಟಿಸಿದ್ದಾರೆ. ಆಕಾಂಕ್ಷ ಪೋಷಕರು ಪಂಜಾಬ್ ಗೆ ತಲುಪಿದ್ದು, ಪ್ರಕರಣ ದಾಖಲು ಮಾಡಿದ್ದಾರೆ ಮತ್ತು ಈ ಸಾವಿನ ಸತ್ಯಾಸತ್ಯತೆ ಹೊರಗೆಳೆಯಬೇಕೆಂದು ಆಗ್ರಹಿಸಿದ್ದಾರೆ. ಕಲಿಕೆಯಲ್ಲಿ ಪ್ರತಿಭಾವಂತೆಯಾಗಿದ್ದ ಮಗಳನ್ನು ಕಳೆದುಕೊಂಡ ಹೆತ್ತವರು ಶೋಕದಲ್ಲಿ ಮುಳುಗಿದ್ದಾರೆ.