21 June 2025 | Join group

ಗೃಹಲಕ್ಷ್ಮಿ ಯೋಜನೆಯ ಪಾವತಿ ವಿಳಂಬ : ಸರಕಾರದಿಂದ ಗೊಂದಲದ ಹೇಳಿಕೆ

  • 20 May 2025 04:05:38 PM

Grahalakshmi Scheme : ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಘೋಷಿಸಲಾದ ಮಾಸಿಕ ₹2,000 ನೇರ ಹಣಕಾಸು ಸಹಾಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಪಾವತಿಯಲ್ಲಿ ವಿಳಂಬವಾಗಿದ್ದು, ಇದೀಗ ಸರಕಾರದ ಸಚಿವರುಗಳ ವಿಭಿನ್ನ ಹೇಳಿಕೆಗಳು ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

 

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು "ಸರ್ವ ಜನಾಂಗದ ಶಾಂತಿಯ ತೋಟ" ಎಂಬ ಘೋಷಣಾಪತ್ರವನ್ನು ಬಿಡುಗಡೆ ಮಾಡಿತ್ತು. ಈ ಘೋಷಣಾಪತ್ರದಲ್ಲಿ ಪಕ್ಷವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಘೋಷಿಸಿತು, ಅವುಗಳಲ್ಲಿ ಪ್ರಮುಖವಾದುದು ಗೃಹಲಕ್ಷ್ಮಿ ಯೋಜನೆ ಆಗಿತ್ತು. ಈ ಯೋಜನೆ, ಕಾಂಗ್ರೆಸ್ ಪಕ್ಷದ ಐದು ಪ್ರಮುಖ ಯೋಜನೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿತು.

 

ಗೃಹಲಕ್ಷ್ಮಿ ಯೋಜನೆಯ ಇತಿಹಾಸ
ಅಗಸ್ಟ್ 2023 ರಲ್ಲಿ ಆರಂಭಗೊಂಡ ಈ ಯೋಜನೆಯಡಿ, ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಮಾಸಿಕ ₹2,000 ನೇರ ಹಣಕಾಸು ಸಹಾಯ ನೀಡಲಾಗುತ್ತದೆ. ಅಕ್ಟೋಬರ್ 2024 ರವರೆಗೆ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಮಾಸಿಕ ₹2,000 ನೇರ ಹಣಕಾಸು ಸಹಾಯವನ್ನು ನೀಡಲಾಗುತ್ತಿತ್ತು. ಆದರೆ, ನವೆಂಬರ್ ಮತ್ತು ಡಿಸೆಂಬರ್ 2024 ರ ಪಾವತಿಗಳು ವಿಳಂಬವಾಗಿದ್ದು, ಅನೇಕ ಫಲಾನುಭವಿಗಳು ಪಾವತಿಗಳನ್ನು ಪಡೆಯಲು ಕಾಯುತ್ತಿದ್ದಾರೆ.

 

ಫೆಬ್ರವರಿ ತಿಂಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ!
ಫೆಬ್ರವರಿ 2025 ರಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನವೆಂಬರ್ ಮತ್ತು ಡಿಸೆಂಬರ್ 2024 ರ ಪಾವತಿಗಳನ್ನು ಮೇ ತಿಂಗಳಲ್ಲಿ ಹಂತವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಹಣ ಪಾವತಿಯಾಗದೆ ಇರುವುದರಿಂದ ಫಲಾನುಭವಿಗಳಿಗೆ ನಿರಾಸೆಯಾಗಿದೆ.

 

ಡಿಕೆ ಶಿವಕುಮಾರ್ ಗೊಂದಲದ ಹೇಳಿಕೆ
ಮೇ 19 ರಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇರೇನೇ ಹೇಳಿಕೆ ನೀಡಿದ್ದಾರೆ. ಹೊಸಪೇಟೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಅವರು, “ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಕೊಡುತ್ತೇವೆ ಎಂದು ನಾವು ಹೇಳಲಿಲ್ಲ. ಸರಕಾರಕ್ಕೆ ದುಡ್ಡು ಬರ್ತಾ ಇರಬೇಕು. ನೀವು ಟ್ಯಾಕ್ಸ್‌ ಕಟ್ಟುತ್ತಾ ಇರಬೇಕು ಮತ್ತು ನಾವು ಅದನ್ನು ಕೊಡ್ತಾ ಇರಬೇಕು. ಕಾಂಟ್ರಾಕ್ಟ್ ಮಾಡುವವರಿಗೆ ಮರು ದಿನವೇ ದುಡ್ಡು ಬರುತ್ತಾ? ಒಂದು, ಎರಡು, ಮೂರು, ನಾಲ್ಕು ವರ್ಷ ಆಗ್ತಾ ಇರುತ್ತವೆ" ಎಂದು ಹೇಳಿದ್ದಾರೆ.

 

ಸರ್ಕಾರಿ ಅಧಿಕಾರಿಗಳು ಪಾವತಿ ವಿಳಂಬಗಳನ್ನು ತಾಂತ್ರಿಕ ದೋಷಗಳು ಎಂದು ವಿವರಿಸಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಆರ್ಥಿಕ ಸ್ಥಿತಿ ಬಲಿಷ್ಠವಾಗಿದೆ ಮತ್ತು ಯೋಜನೆಗಳನ್ನು ಮುಂದುವರಿಸಲು ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿದ್ದಾರೆ. ರಾಜ್ಯದ ಮಹಿಳೆಯರು ಆದಷ್ಟು ಬೇಗ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿ ಕೈಗೆ ಸೇರಲಿ ಎಂದು ಇಚ್ಚಿಸಿದ್ದಾರೆ.