ಬಂಟ್ವಾಳ: ಮಕ್ಕಳಲ್ಲಿ ಆತ್ಮವಿಶ್ವಾಸ ಗಟ್ಟಿಯಾಗಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ನಡೆದಿದೆ. ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪ್ರಾರ್ಥನಾ ಎಚ್.ಕೆ 2024-25 ರ ಸಾಲಿನ ಹತ್ತನೇ ತರಗತಿಯ ಮರು ಮೌಲ್ಯಮಾಪನದಲ್ಲಿ 2 ಹೆಚ್ಚಿನ ಅಂಕ ಪಡೆದು ಕರ್ನಾಟಕ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ.
ಉಳಿ ಗ್ರಾಮದ ಕೇರ್ಯ ನಿವಾಸಿ ಹರಿಶ್ಚಂದ್ರ ಪೂಜಾರಿ ಮತ್ತು ಕುಶಲ ದಂಪತಿಯ ಪುತ್ರಿ ಪ್ರಾರ್ಥನಾ ರವರು ಒಟ್ಟು 625 ರಲ್ಲಿ 624 ಅಂಕ ಗಳಿಸಿ ರಾಜ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೆಸರು ತಂದಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯ ಆರಂಭಿಕ ಫಲಿತಾಂಶದಲ್ಲಿ 622 ಅಂಕ ಪಡೆದಿದ್ದರು. ನಂತರ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ ಈಗ ಬಂದಿರುವ ಅಂಕ ಎಲ್ಲರನ್ನು ಸಂತಸದಲ್ಲಿ ಮುಳುಗಿಸಿದೆ.
ಈ ಹಿಂದೆ ಹಿಂದಿ ಮತ್ತು ವಿಜ್ಞಾನದಲ್ಲಿ ಪ್ರಾರ್ಥನಾಗೆ ತಲಾ 99 ಅಂಕ ಬಂದಿತ್ತು ಆದರೆ ಇದೀಗ ಎರಡು ವಿಷಯಗಳಲ್ಲಿ 100 ಅಂಕ ಬಂದಿರುವುದರಿಂದ, 622 ರ ಒಟ್ಟು ಅಂಕ 624 ಕ್ಕೆ ಏರಿದೆ. ಇದರಿಂದ ಪ್ರಾರ್ಥನಾ ರಾಜ್ಯಕ್ಕೆ 2024-25 ರ ಹತ್ತನೇ ತರಗತಿಯ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.