ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು ಕೆಲವು ದಿನಗಳಿಂದ ಕರ್ನಾಟಕದ ಹಲವಾರು ಕಡೆ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಹಲವಾರು ಅವಾಂತರಗಳು ನಡೆದ ಘಟನೆ ವರದಿಯಾಗಿದ್ದು, ಬಹಳಷ್ಟು ಮನೆಗಳಿಗೆ ನೀರು ನುಗಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಉತ್ತರ ಕನ್ನಡ ಜಿಲ್ಲೆಗಳ ಕೆಲ ಭಾಗಗಳಲ್ಲಿ ಹೆಚ್ಚಿನ ಮಳೆ ಸುರಿದ ಪರಿಣಾಮ ಗುಡ್ಡೆ ಕುಸಿತ, ಮರಗಳು ಬೀಳುವುದು ಹಾಗು ಇನ್ನಿತರ ಕಷ್ಟ ನಷ್ಟಗಳ ಪ್ರಕರಣಗಳು ವರದಿಯಾಗಿತ್ತು.
ಆದರೆ, ಹವಾನ ಇಲಾಖೆ ಇಂದಿನಿಂದ ಮತ್ತೊಮ್ಮೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಮೇ 25 ರಿಂದ ಮೇ 28 ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕಾಸರಗೋಡು ಸೇರಿ ಕರಾವಳಿ ಜೆಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಈ ನಾಲ್ಕು ದಿನ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಸದ್ಯ ವಾಯುಭಾರ ಕುಸಿತದ ಕೇಂದ್ರಬಿಂದು ದಕ್ಷಿಣ ಕೊಂಕಣ - ಗೋವಾ ಸಮೀಪಿಸಿದ್ದು, ಪ್ರಬಲಗೊಂಡರೆ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಇದರಿಂದ ಗಂಟೆಗೆ 45-55 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿ ತಿಳಿಸಲಾಗಿದೆ. ಮಕ್ಕಳನ್ನು ವಿನಃ ಕಾರಣ ಹೊರಗಡೆ ಕಳುಹಿಸಬಾರದು. ವಾಹನ ಚಾಲಕರು ಅತಿಯಾದ ಎಚ್ಚರಿಕೆ ವಹಿಸಬೇಕು ಮತ್ತು ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗಿದೆ.