ಎಲ್ಲರ ಅಚ್ಚುಮೆಚ್ಚಿನ ಸ್ವೀಟ್ 'ಮೈಸೂರ್ ಪಾಕ್' ಇನ್ನು ಮುಂದೆ 'ಮೈಸೂರ್ ಶ್ರೀ' ಯಾಗಿ ರಾಜಸ್ತಾನದ ಜೈಪುರದ ಸಿಹಿತಿಂಡಿ ಅಂಗಡಿಗಳಲ್ಲಿ ಕಾಣಿಸಿಕೊಳ್ಳಲಿದೆ. ಭಾರತೀಯ ಸಿಹಿತಿಂಡಿಗಳ ಹೆಸರುಗಳಿಂದ 'ಪಾಕ್' ಅನ್ನು ತೆಗೆದುಹಾಕಿ ಅದನ್ನು ಹೆಚ್ಚು ಸಾಂಸ್ಕೃತಿಕವಾಗಿ ಪ್ರತಿಧ್ವನಿಸುವ ಮತ್ತು ದೇಶಭಕ್ತಿಯ ಪರ್ಯಾಯಗಳೊಂದಿಗೆ ಬದಲಾಯಿಸಲು ನಿರ್ಧರಿಸಿಲು ಹೊರಟ್ಟಿದ್ದೇವೆ ಎಂದು ಅಲ್ಲಿನ ಮಾಲೀಕರು ತಿಳಿಸುತ್ತಾರೆ.
ಯಾವೆಲ್ಲಾ ಸ್ವೀಟ್ಸ್ ಹೆಸರು ಬದಲಾಯಿಸಿದ್ದಾರೆ ?
ರಾಜಸ್ತಾನದ ಸಿಹಿತಿಂಡಿ ಅಂಗಡಿಗಳಲ್ಲಿ 'ಪಾಕ್' ಹೆಸರಿನಿಂದ ಕೊನೆಗೊಳ್ಳುವ ಸ್ವೀಟ್ಸ್ ಗಳಿಗೆ 'ಶ್ರೀ' ಹೆಸರು ಜೋಡಿಸಿದ್ದಾರೆ. ಉದಾಹರಣೆಗೆ 'ಮೋತಿ ಪಾಕ್' ಅನ್ನು 'ಮೋತಿ ಶ್ರೀ', 'ಗೊಂಡ್ ಪಾಕ್' ಅನ್ನು 'ಗೊಂಡ್ ಶ್ರೀ', 'ಮೈಸೂರು ಪಾಕ್' ಅನ್ನು 'ಮೈಸೂರು ಶ್ರೀ' ಎಂದು ಮರುನಾಮಕರಣ ಮಾಡಿದ್ದಾರೆ. ಅಲ್ಲಿನ ಜನಪ್ರಿಯ ಸಿಹಿತಿಂಡಿ ಅಂಗಡಿಯಾದ ತ್ಯೋಹಾರ್ ಸ್ವೀಟ್ಸ್ ಕೂಡ ಈ ಬದಲಾವಣೆಯನ್ನು ಅಳವಡಿಸಿಕೊಂಡವರಲ್ಲಿ ಸೇರಿದೆ.
ಮೈಸೂರ್ ಪಾಕ್ ಗೆ ಪಾಕ್ ಹೆಸರು ಹೇಗೆ ಜೋಡಣೆಯಾಗಿದೆ?
ಮೈಸೂರ್ ಪಾಕ್ ಸಕ್ಕರೆಯ ಪಾಕದಿಂದ ತಯಾರಿಸಲಾಗುವ ಅತಿ ಬೇಡಿಕೆಯ ಸ್ವೀಟ್. 'ಪಾಕ್' ಎಂಬ ಪದವು ಕನ್ನಡ ಪದ 'ಪಾಕ' ದಿಂದ ಹುಟ್ಟಿಕೊಂಡಿದೆ, ಇದರರ್ಥ ಸಕ್ಕರೆ ಪಾಕ. ಕ್ರಮೇಣವಾಗಿ ಮೈಸೂರ್ ಪಾಕ್ ದೇಶದಾದ್ಯಂತ ಜನರ ಮೆಚ್ಚಿನ ಸ್ವೀಟ್ ಆಗಿ ಮನೆ ಮನೆಗೆ ತಲುಪಿದೆ. ಹಿಂದಿ ಭಾಷಿಕರು ಕನ್ನಡ 'ಪಾಕ'ವನ್ನು ಪಾಕ್ ಎಂದು ಕರೆಯುವುದರಿಂದ ಇದು 'ಮೈಸೂರ್ ಪಾಕ' ಹೋಗಿ 'ಮೈಸೂರ್ ಪಾಕ್' ಆಗಿ ಪರಿವರ್ತನೆಗೊಂಡಿದೆ ಎಂದು ಬಲ್ಲವರು ತಿಳಿಸುತ್ತಾರೆ.
ಮೈಸೂರ್ ಪಾಕ್ ಸಂಶೋಧಕರ ವಿರೋಧ
ಜೈಪುರದ ಸಿಹಿತಿಂಡಿ ಮಾಲಕರ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಮೈಸೂರ್ ಪಾಕ್ನ ಸಂಶೋಧಕ ಕಾಕಾಸುರ ಮಾದಪ್ಪ ಅವರ ಮರಿಮೊಮ್ಮಗ ಎಸ್ ನಟರಾಜ್ ಹೆಸರನ್ನು ಬದಲಾಯಿಸುವುದನ್ನು ಒಪ್ಪುವುದಿಲ್ಲ. ನ್ಯೂಸ್ 18 ವರದಿಯಲ್ಲಿ, ಅವರು, "ಇದನ್ನು ಮೈಸೂರು ಪಾಕ್ ಎಂದು ಕರೆಯಿರಿ - ಬೇರೆ ಯಾವುದೇ ಹೆಸರಿರಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಮೈಸೂರಿನಲ್ಲಿ ಸಿಹಿತಿಂಡಿಯ ಮೂಲವನ್ನು ಗಮನಿಸಿದರೆ, 'ಮೈಸೂರು ಪಾಕ್' ಎಂಬ ಹೆಸರು ಬಂದಿದೆ ಮತ್ತು ಅದನ್ನು 'ಬೇರೆ ಯಾವುದನ್ನಾದರೂ ಕರೆಯಲು ಯಾವುದೇ ಕಾರಣವಿಲ್ಲ ಎನ್ನುತ್ತಾರೆ ಇವರು.
ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಸಂಪ್ರದಾಯಗಳು ಮತ್ತು ಹೆಸರುಗಳನ್ನು ಮುಟ್ಟಬಾರದು ಎಂದು ಅವರು ಮತ್ತಷ್ಟು ವಾದಿಸಿದರು. "ಪ್ರತಿಯೊಂದು ಸ್ಮಾರಕ ಅಥವಾ ಸಂಪ್ರದಾಯವು ತನ್ನದೇ ಆದ ಸರಿಯಾದ ಹೆಸರನ್ನು ಹೊಂದಿರುವಂತೆ, ಮೈಸೂರು ಪಾಕ್ ಕೂಡ ತನ್ನದೇ ಆದ ಹೆಸರನ್ನು ಹೊಂದಿದೆ. ಅದನ್ನು ಬದಲಾಯಿಸಬಾರದು ಅಥವಾ ತಪ್ಪಾಗಿ ಪ್ರತಿನಿಧಿಸಬಾರದು" ಎಂದು ಎಸ್. ನಟರಾಜ್ ತಿಳಿಸಿದ್ದಾರೆ.
ಈ ಹೆಸರು ಬದಲಾವಣೆಗೆ ಮೂಲ ಕಾರಣ
ಪಾಕಿಸ್ತಾನದ ಉಗ್ರ ನೆಲೆಗಳನ್ನು ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಧ್ವಂಸ ಮಾಡಿದ ನಂತರ ಎರಡು ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು. ತದನಂತರ ಭಾರತೀಯರಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ಇಮ್ಮಡಿಯಾಗಿದೆ. ಪಾಕಿಸ್ತಾನದ ಯಾವುದೇ ಹೆಸರು ಭಾರತದಲ್ಲಿ ಇರಬಾರದೆಂಬ ಉದ್ದೇಶದಿಂದ ಈ ಮರುನಾಮಕಣಕ್ಕೆ ಜನ ಇಳಿದ್ದಿದ್ದಾರೆ. ಇತ್ತೀಚಿಗೆ ಹೈದರಾಬಾದ್ ಮೂಲದ ಕರಾಚಿ ಹೆಸರಿನ ಬೇಕರಿಯ ಹೆಸರು ಬದಲಾವಣೆಗೆ ಒತ್ತಾಯಿಸಿ ಬೆಂಗಳೂರು ಮತ್ತು ಹೈದರಾಬಾದ್ ಅಂಗಡಿಗಳಿಗೆ ಮುತ್ತಿಗೆ ಹಾಕಿದ ಪ್ರಕರಣ ಬೆಳಕಿಗೆ ಬಂದಿತ್ತು.