ಮಂಗಳೂರು : ಬಜ್ಪೆಯಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಬಜ್ಪೆ ಜಂಕ್ಷನ್ ಬಳಿ ಇರುವ ಶಾರದಾ ಮಂಟಪದಲ್ಲಿ ನಡೆದ 'ಬಜ್ಪೆ ಚಲೋ' ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಮಳೆ ಗಾಳಿಯನ್ನು ಸಹ ಲೆಕ್ಕಿಸದೆ ಮಹಿಳೆಯರು, ಪುರುಷರು, ರಾಜಕೀಯ ಮುಖಂಡರು ಮತ್ತು ಹಿಂದೂಪರ ಸಂಘಟನೆಯ ಮುಖಂಡರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA ಗೆ ಒಪ್ಪಿಸಬೇಕೆಂಬುವುದೇ ಇವರೆಲ್ಲರ ಒತ್ತಾಯವಾಗಿತ್ತು. ಹನುಮಾನ್ ಚಾಲೀಸಾ ಭಕ್ತಿಗೀತೆಯೊಂದಿಗೆ, ಸುಹಾಸ್ ಶೆಟ್ಟಿಯ ಭಾವಚಿತ್ರಕ್ಕೆ ನಮನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.'ಬೋಲೋ ಭಾರತ್ ಮಾತಾ ಕಿ', 'ವಂದೇ ಮಾತರಂ', ಸುಹಾಸ್ ಶೆಟ್ಟಿ ಪ್ರಕರಣ NIA ಗೆ' ಎನ್ನುವ ಘೋಷಣೆಗಳು ಮುಗಿಲುಮುಟ್ಟಿದವು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ್, ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ಬಜ್ಪೆ, ತಾಯಿ ಸುಲೋಚನಾ ಎಂ ಶೆಟ್ಟಿ, ಮುಖ್ಯ ಭಾಷಣಕಾರರಾಗಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಶ್ರೀಕಾಂತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಮೂಡಬಿದ್ರೆಯ ಜನಪ್ರಿಯ ಶಾಸಕ ಉಮಾನಾಥ ಕೋಟ್ಯಾನ್, ಬಜರಂಗ ದಳದ ಪ್ರಾಂತ ಸಂಯೋಜಕರಾದ ಭುಜಂಗ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಯೊಬ್ಬ ಗಣ್ಯರು ಮಾತನಾಡಿ, ಸುಹಾಸ್ ಶೆಟ್ಟಿ ಒಬ್ಬ ಗೋ ರಕ್ಷಕ, ಹಿಂದೂಗಳ ರಕ್ಷಣೆಗಾಗಿ ಅವರು ಯಾವಾಗಲು ಸನ್ನದ್ಧರಾಗಿದ್ದರು ಆದರೆ ಜಿಹಾದಿ ಮಾನಸಿಕತೆಯ ಜನ ಅವರನ್ನು ಕೊಂ*ದಿದ್ದಾರೆ . ಪೊಲೀಸರು ನಡೆಸುವ ಈ ತನಿಖೆಯಲ್ಲಿ ನಮಗೆ ಸಂತುಷ್ಟಿಯಿಲ್ಲ ಆದ್ದರಿಂದ ಈ ಪ್ರಕರಣವನ್ನು ಆದಷ್ಟು ಬೇಗ NIA ಗೆ ಒಪ್ಪಿಸಬೇಕೆಂದು ಕೇಳಿಕೊಂಡರು.
ಕರ್ನಾಟಕ ಕಾಂಗ್ರೆಸ್ ಸರಕಾರದ ವತಿಯಿಂದ ಯಾರೊಬ್ಬರೂ ಸುಹಾಸ್ ಮನೆಗೆ ಭೇಟಿ ನೀಡಿ ಆತನ ಪೋಷಕರನ್ನು ಸಂತೈಸುವ ಕೆಲಸ ಕೂಡ ಮಾಡದ ಸರಕಾರಕ್ಕೆ ದಿಕ್ಕಾರ ಎಂದು ಕೂಗುವುದರ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಹಾಸ್ ತಾಯಿ ಮಾತನಾಡಿ ಆದಷ್ಟು ಬೇಗ ನನ್ನ ಮಗನ ಹತ್ಯಾ ಪ್ರಕರಣವನ್ನು NIA ತಂಡಕ್ಕೆ ಒಪ್ಪಿಸಬೇಕೆಂದು ಬೇಡಿಕೊಂಡು ಕಣ್ಣೀರಿಟ್ಟರು.