ಬಂಟ್ವಾಳ : ಇಲ್ಲಿನ ಕೊಳತಮಜಲ್ ನಿವಾಸಿ ಬಂಟ್ವಾಳದ ಕೊಳತಮಜಲ್ ನಲ್ಲಿ ಪಿಕಪ್ ಡ್ರೈವರ್ ಅಬ್ದುಲ್ ರಹೀಮ್ (32) ಮತ್ತು ಜೊತೆಗಿದ್ದ ಕಲಂದರ್ ಶಾಫಿ ಮೇಲೆ ನಡೆದ ದಾಳಿ ಪರಿಣಾಮ ಮುಸ್ಲಿಂ ಸಂಘಟನೆಗಳು ಮೇ 28 ರಂದು ಬಂದ್ ಗೆ ಕರೆ ನೀಡಿದ್ದವು. ಅಧಿಕೃತವಾಗಿ ಬಂದ್ ಗೆ ಕರೆ ನೀಡದಿದ್ದರೂ ಸಾಮಾಜಿಕ ತಾಣಗಳಲ್ಲಿ ಸಂದೇಶ ಹರಡುತ್ತಿತ್ತು.
ಉಳ್ಳಾಲ, ಕೊಣಾಜೆ, ದೇರಳಕಟ್ಟೆಯಲ್ಲಿ ಸ್ವಲ್ಪ ಅಂಗಡಿಗಳು ಮುಚ್ಚಿದ್ದು, ಬಸ್ ಓಡಾಟ ಸ್ವಲ್ಪ ವಿರಳವಾಗಿತ್ತು ಎಂದು ವರದಿಯಾಗಿದೆ. ಸುರತ್ಕಲ್, ಕೂಳೂರು, ಬೈಕಂಪಾಡಿ, ಕಾವೂರು ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಕೆಲ ಅಂಗಡಿಗಳು ಮುಚ್ಚಿದ್ದು, ಸುರತ್ಕಲ್ ನಲ್ಲಿ ಬಸ್ ಗೆ ಕಲ್ಲು ತೂರಾಟ ಆದ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ರಹೀಮ್ ಮೃತದೇಹ ಹೊತ್ತುಕೊಂಡು ಹೋಗುವಾಗ ಫರಂಗಿಪೇಟೆಯಲ್ಲಿ ಸ್ವಲ್ಪ ಹೊತ್ತಿನ ಮಟ್ಟಿಗೆ ಸಂಚಾರ ನಿಲುಗಡೆ ಮಾಡಲಾಗಿತ್ತು. ಮಂಗಳೂರು ನಗರದಲ್ಲಿ ಎಂದಿನಂತೆ ವಾಹನ ಸಂಚಾರ ಸಾಮಾನ್ಯವಾಗಿತ್ತು. ದಕ್ಕೆ ಮತ್ತು ಬಂದರ್ ಪ್ರದೇಶದಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಲಾಗಿತ್ತು ಎಂದು ವರದಿಯಾಗಿದೆ.
ಪುತ್ತೂರು, ಕಡಬ ಮತ್ತು ಉಪ್ಪಿನಂಗಡಿಗಳಲ್ಲಿ ಕೆಲ ಅಂಗಡಿಗಳು ಸ್ವಯಂ ಪ್ರೇರಿತ ಮುಚ್ಚಲಾಗಿತ್ತು. ಖಾಸಗಿ ಮತ್ತು ಸರಕಾರಿ ಎಂದಿನಂತೆ ಸಂಚರಿಸಿದವು.
ಮೂವರ ಬಂಧನ
ಈ ಪ್ರಕರಣಕ್ಕೆ ಸಂಬಧಿಸಿದ್ದಂತೆ ಈಗಾಗಲೇ ಪೊಲೀಸರು 3 ಜನರನ್ನು ಬಂಧಿಸಿದ್ದಾರೆ ಮತ್ತು ಉಳಿದವರಿಗೆ ಬಲೆ ಬಿಸಿದ್ದಾರೆ. ಒಟ್ಟು 15 ಜನರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಈ ಘಟನೆಯಲ್ಲಿ ಗಾಯಗೊಂಡ ಶಾಫಿಯ ಹೇಳಿಕೆ ಆಧಾರದಲ್ಲಿ , ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.