'ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ. ತಮ್ಮ ಯಾವುದೇ ಸಮಸ್ಯೆಗೂ ಹೆತ್ತವರ ಅಥವಾ ತಮಗೆ ಹತ್ತಿರದವರ ಜೊತೆ ಹಂಚಿ, ಚರ್ಚಿಸುವುದರಿಂದ ಈ ರೀತಿಯ ಭಾರವಾಗಿರುವ ಮನಸ್ಥಿತಿಯಿಂದ ಹೊರಬಂದು ಪರಿಹಾರ ಕಂಡುಹಿಡಿಯುವ ಸಾಧ್ಯತೆ ಹೆಚ್ಚು'.
ಪೊನ್ನಂಪೇಟೆ ತಾಲೂಕಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದಾರ್ಥಿನಿ ನೇಣಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಈ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ವರದಿಯಾಗಿದೆ. ತಾನು ವಾಸಿಸುತ್ತಿದ್ದ ಹಾಸ್ಟೆಲ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ತೇಜಸ್ವಿನಿ (19) ಮೂಲತಃ ರಾಯಚೂರು ಜಿಲ್ಲೆಯವಳಾಗಿದ್ದಾಳೆ ಎಂದು ತಿಳಿದು ಬಂದಿದೆ.
ಮೂರು ದಿನಗಳ ಹಿಂದೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದ ಈಕೆ, ಹುಟ್ಟು ಹಬ್ಬದ ದಿನ ಬಾರದ ಸಹಪಾಠಿಗಳಿಗೆ ಆತ್ಮಹತ್ಯೆ ಮಾಡುವ ದಿನ ಸಿಹಿ ತಿಂಡಿ ಕೂಡ ಹಂಚಿದ್ದಾಳೆ ಎನ್ನಲಾಗಿದೆ. ಎಂದಿನಂತೆ ತರಗತಿಗೆ ಆಗಮಸಿ ಸಂಜೆ 4.00 ಗಂಟೆಗೆ ಹಾಸ್ಟೆಲ್ ತಲುಪಿದ್ದು, ತನ್ನ ಕೊಠಡಿಯ ಒಳಗೆ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾಳೆ.
ಸಂಜೆ 4.30 ಕ್ಕೆ ಸಹಪಾಠಿಯೊಬ್ಬರು ಕೊಠಡಿಗೆ ಬಂದು ಬಾಗಿಲು ತೆಗೆಯಲು ಕೇಳಿಕೊಂಡಾಗ, ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಎಷ್ಟೇ ಕರೆದರೂ ಮತ್ತು ಬಾಗಿಲು ಬಡಿದರೂ ಪ್ರಯೋಜನವಾಗದೆ ಇದ್ದಾಗ, ಸಹಪಾಠಿಯು ಹಾಸ್ಟೆಲ್ ಮೇಲ್ವಿಚಾರಕರಿಗೆ ಸಂದೇಶ ಮುಟ್ಟಿಸಿದ್ದರು. ಅವರು ಬಂದು ಬಾಗಿಲು ತೆರೆದು ನೋಡಿದಾಗ, ತೇಜಸ್ವಿನಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಕೂಲಂಕುಷವಾಗಿ ಪರಿಶೀಲಿಸಿದ ನಂತರ, ಆಕೆಯ ಡೆತ್ ನೋಟ್ ಒಂದು ಪತ್ತೆಯಾಗಿದ್ದು, ತಾನು ಕಲಿಯುತ್ತಿದ್ದ ವಿಭಾಗದಲ್ಲಿ ಒಟ್ಟು ಆರು ವಿಷಯದಲ್ಲಿ ಹಿಂದೆ ಇದ್ದ ಕಾರಣ ಮತ್ತು ನನಗೆ ಮುಂದೆ ಓದಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟಿದ್ದಾಳೆ. ಈ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ನಡೆದಿದ್ದು, ಪೊನ್ನಪೇಟೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.