20 June 2025 | Join group

ಭಾರತದ ಭಾಷೆ 'ಏಕತೆ ಮತ್ತು ವೈವಿಧ್ಯತೆ' - ಸ್ಪೇನ್ ನಲ್ಲಿ ಕನಿಮೋಳಿ ಹೇಳಿಕೆಗೆ ಚಪ್ಪಾಳೆಯ ಮಹಾಪೂರ!

  • 03 Jun 2025 12:31:32 AM

ಭಾರತದ ರಾಷ್ಟ್ರೀಯ ಭಾಷೆ 'ಏಕತೆ ಮತ್ತು ವೈವಿಧ್ಯತೆ' - ಕನಿಮೋಳಿ

ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆ ಮತ್ತು ಅದರ ಜೊತೆಗಿನ ನಂಟನ್ನು ವಿಶ್ವಕ್ಕೆ ತಿಳಿಸುವ ಕಾರಣಕ್ಕಾಗಿ ಕಳುಹಿಸಿದ ನಿಯೋಗಗಳು ವಿದೇಶದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಭಯೋತ್ಪಾದನೆಯ ಬಗ್ಗೆ ಭಾರತದ 'ಶೂನ್ಯ ಸಹಿಷ್ಣುತೆ' ತಿಳಿಸಲು ಕನಿಮೋಳಿ ನೇತೃತ್ವದ ತಂಡ ಸ್ಪೇನ್ ತಲುಪಿದೆ. ವಿಶೇಷವೆಂದರೆ ದಕ್ಷಿಣ ಕನ್ನಡ ಸಂಸದ ನಿವೃತ ಕ್ಯಾ. ಬ್ರಜೇಶ್ ಚೌಟ ಈ ತಂಡದ ಸದ್ಯಸರಲ್ಲಿ ಒಬ್ಬರು.

 

ಕನಿಮೋಳಿ ನಿಯೋಗವನ್ನು ಉದ್ದೇಶಿಸಿ ಮಾತನಾಡಿ ' ಭಾರತವು ಸಿಂಧೂ ಜಲ ಒಪ್ಪಂದ ಬಗ್ಗೆ ಮಾತುಕತೆ ನಡೆಸಲು ಬಹಳ ದಿನಗಳಿಂದ ಬಯಸುತ್ತಿದೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ ಮತ್ತು ತಂತ್ರಜ್ಞಾನ ಬದಲಾಗಿದೆ, ಹವಾಮಾನ ಬದಲಾಗಿದೆ. ಹಲವು ಸಮಸ್ಯೆಗಳಿವೆ ಆದರೆ ಪಾಕಿಸ್ತಾನ ಸರ್ಕಾರ ಅದನ್ನು ಒಪ್ಪಿಕೊಂಡಿಲ್ಲ' ಎಂದು ತಿಳಿಸಿದರು.

 

'ನಾವು ಅಣೆಕಟ್ಟುಗಳನ್ನು ನವೀಕರಿಸಬೇಕಾಗಿದೆ ಮತ್ತು ಅದರಲ್ಲಿ ಹಲವು ಸಮಸ್ಯೆಗಳಿವೆ. ಆದರೆ ನಾವು ಅದನ್ನು ಮಾಡಲು ಸಾಧ್ಯವಾಗಿಲ್ಲ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲವೂ ಸರಿಯಾಗಿದ್ದಾಗ ನಾವು ಪಾಕಿಸ್ತಾನದೊಂದಿಗೆ ಮಾತುಕತೆ ಪ್ರಾರಂಭಿಸಿದಾಗ, ನಾವು ಇದನ್ನು ಸಹ ಮಾತುಕತೆ ನಡೆಸುತ್ತೇವೆ' ಎಂದು ತಿಳಿಸಿದರು

 

'ಆದರೆ ನಾವು ನೀರನ್ನು ನಿಲ್ಲಿಸಿದ್ದೇವೆ ಎಂದರ್ಥವಲ್ಲ ಮತ್ತು ಪ್ರವಾಹ ಬಂದಾಗ ಪಾಕಿಸ್ತಾನಕ್ಕೆ ತಿಳಿಸುವುದಿಲ್ಲ ಎಂದರ್ಥವಲ್ಲ, ಜನರನ್ನು ಮತ್ತು ರೈತರನ್ನು ಬಳಲಲು ಬಿಡೋದಿಲ್ಲ, ನಾವು ನೀರನ್ನು ಸ್ಥಗಿತಗೊಳಿಸಿದ್ದೇವೆ ಎಂದು ಘೋಷಿಸುವುದು ಅಷ್ಟೇ' ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿದರು.

 

ಈ ಸಂದರ್ಶನದಲ್ಲಿ ದೊಡ್ಡ ಚಪ್ಪಾಳೆಯ ಕ್ಷಣವೊಂದು ಕಾಣಸಿಕ್ಕಿತ್ತು. ಪತ್ರಕರ್ತರೊಬ್ಬರು ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂದು ಕೇಳಿದ ಪ್ರಶ್ನೆಗೆ ಕನಿಮೋಳಿಯವರು "ನೀವು ರಾಷ್ಟ್ರೀಯ ಭಾಷೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೀರಾ? ಭಾರತದ ರಾಷ್ಟ್ರೀಯ ಭಾಷೆ 'ಏಕತೆ ಮತ್ತು ವೈವಿಧ್ಯತೆ' ಎಂದು ನಾನು ಭಾವಿಸುತ್ತೇನೆ ಮತ್ತು ಈ ನಿಯೋಗದ ಮೂಲಕ ಆ ಸಂದೇಶವನ್ನು ಜಗತ್ತಿಗೆ ಸಾರಲು ನಾವು ಬಂದಿದ್ದೇವೆ" ಎಂದರು.

 

ಇದೀಗ ಕನಿಮೋಳಿಯವರ ಈ ಹೇಳಿಕೆಗೆ ದೇಶದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರತದ ಏಕತೆ ಮತ್ತು ವೈವಿಧ್ಯತೆಯ ಗುಣ ವಿಶ್ವದಲ್ಲೆಲ್ಲಾ ಪಸರಿಸಲಿದೆ.