20 June 2025 | Join group

ಭಯೋತ್ಪಾದನೆ ವಿರುದ್ಧ ಭಾರತದ ನಿಲುವು ಪ್ರಸ್ತುತಪಡಿಸಲು ಹೊರಟಿದ್ದ ಬ್ರಿಜೇಶ್ ಚೌಟ ವಿದೇಶ ಯಾತ್ರೆಯ ಬಳಿಕ ವಾಪಸು : ಭವ್ಯ ಸ್ವಾಗತ

  • 04 Jun 2025 12:49:57 PM

ಮಂಗಳೂರು : ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ದುಷ್ಟತನವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತ ಪಡಿಸಿ, 'ಆಪರೇಷನ್ ಸಿಂಧೂರ್' ನ ಅನಿವಾರ್ಯತೆಯನ್ನು ವಿವರಿಸುವುದು ಹಾಗೂ ಭಾರತ ಈಗ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಎಂಬುದನ್ನು ಜಗತ್ತಿಗೆ ತಿಳಿಸಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಳಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು 59 ಸದಸ್ಯರ, 7 ತಂಡಗಳನ್ನು ರಚನೆ ಮಾಡಿ ವಿದೇಶಗಳಿಗೆ ಕಳುಹಿಸಿತ್ತು.

 

ಡಿಎಂಕೆ ನಾಯಕಿ ಕನ್ನಿಮೋಳಿಯ ತಂಡದಲ್ಲಿ ಕ್ಯಾ. ಬ್ರಿಜೇಶ್ ಚೌಟ ಕೂಡ ಸದಸ್ಯರಾಗಿದ್ದರು. ಸರ್ವ ಪಕ್ಷ ನಿಯೋಗದಲ್ಲಿ ಭಾಗಿಯಾಗಿ ಭವ್ಯ ಯಶಸ್ವಿನೊಂದಿಗೆ ಮರಳಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ರವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು. ಇವರಿದ್ದ ತಂಡ ಸ್ಪೇನ್ ಮತ್ತು ಲಾಟ್ವಿಯಾ ದೇಶಗಳಿಗೆ ಪ್ರವಾಸ ಮಾಡಿದೆ.

 

ಈ ಸಂದರ್ಭದಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

 

ಕನ್ನಿಮೋಳಿಯ ತಂಡದಲ್ಲಿ ಕ್ಯಾ. ಬ್ರಿಜೇಶ್ ಚೌಟ, ಎಸ್‌ಪಿಯ ರಾಜೀವ್ ರೈ, ಎನ್‌ಸಿಯ ಮಿಯಾನ್ ಅಲ್ತಾಫ್ ಅಹ್ಮದ್, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ ಮತ್ತು ರಾಯಭಾರಿ ಜಾವೇದ್ ಅಶ್ರಫ್ ಅವರನ್ನೊಳಗೊಂಡಿತ್ತು.