ಮಂಗಳೂರು : ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿರುವ ಕಣಚೂರು ವೈದ್ಯಕೀಯ ಕಾಲೇಜಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ ಕ್ಯಾಂಪಸ್ ಒಳಗಡೆ ಬಾಂಬ್ ಇಡಲಾಗಿದೆ ಎಂದು ಬೆದರಿಸಿದ ಘಟನೆ ಇಂದು ನಡೆದಿದೆ. ತಕ್ಷಣ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಪೂರ್ಣ ಪ್ರಮಾಣದ ಶೋಧ ನಡೆಸಿ ಬೆದರಿಕೆಯನ್ನು ಸುಳ್ಳು ಎಂದು ಘೋಷಿಸಿದ್ದಾರೆ.
ಈ ಕರೆಯ ನಂತರ ಅಧಿಕಾರಿಗಳು, ಕಾಲೇಜ್ ಒಳಗಡೆ ಇದ್ದ ಸಿಬ್ಬಂದಿಗಳನ್ನು, ವಿದ್ಯಾರ್ಥಿಗಳನ್ನು ಮತ್ತು ರೋಗಿಗಳನ್ನು ಹೊರಗಡೆ ಕಳುಹಿಸಿದರು. ಬಾಂಬ್ ಪತ್ತೆ ಮತ್ತು ವಿಲೇವಾರಿ ದಳವನ್ನು ಮತ್ತು ಸ್ನಿಪರ್ ನಾಯಿಗಳನ್ನು ಕರೆಸಿ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಿದರು. ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಬಲೆ ಬಿಸಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ, ಕರೆ ಮಾಡಿದ ವ್ಯಕ್ತಿ ಮೊಬೈಲ್ ಫೋನ್ ನಿಂದ ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.