20 June 2025 | Join group

ಇಂಜಿನಿಯರಿಂಗ್ ವಿದ್ಯಾರ್ಥಿನಿ, ಯಕ್ಷಗಾನ ಯುವ ಕಲಾವಿದೆ ಚಿನ್ಮಯಿ ಶೆಟ್ಟಿ - ಬೆಂಗಳೂರು ಕಾಲ್ತುಳಿತಕ್ಕೆ ಬಲಿ

  • 05 Jun 2025 10:46:11 AM

ಬೆಂಗಳೂರು: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತದ ದುರಂತದಲ್ಲಿ ಯುವ ಪ್ರತಿಭೆ 19 ವರ್ಷದ ಚಿನ್ಮಯಿ ಶೆಟ್ಟಿ ಮೃತಪಟ್ಟಿರುವ ಹೃದಯ ವಿದ್ರಾಹಕ ಘಟನೆ ನಡೆದಿದೆ.

 

ಚಿನ್ಮಯಿ ಶೆಟ್ಟಿಗೆ ಯಕ್ಷಗಾನ ಅಂದರೆ ಪಂಚಪ್ರಾಣವಾಗಿದ್ದು, 'ಯಕ್ಷರಂಗ ಬೆಂಗಳೂರು' ಇದರ ವಿದ್ಯಾರ್ಥಿಯು ಆಗಿದ್ದರು. ಪ್ರಸ್ತುತ ಬೆಂಗಳೂರು ರಸ್ತೆಯಲ್ಲಿರುವ ಜ್ಯೋತಿ ಇಂಜಿನಿಯರಿಂಗ್ ಕಾಲೇಜು, ಕನಕಪುರದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು.

 

ಯಕ್ಷಗಾನ ಜೊತೆಗೆ ಬಾಸ್ಕೆಟ್ ಬಾಲ್ ಆಟದಲ್ಲೂ ಮುಂಚೂಣಿಯಲ್ಲಿದ್ದ ಚಿನ್ಮಯಿ, ಬಹಳ ಚುರುಕಿನ ಯುವ ಪ್ರತಿಭೆಯಾಗಿದ್ದರು. ಹೆಬ್ರಿ ಕರುಣಾಕರ ಶೆಟ್ಟಿ ಮತ್ತು ಪೂಜಾ ಶೆಟ್ಟಿಯವರ ಮಗಳಾದ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರು ಎಂದು ತಿಳಿದು ಬಂದಿದೆ.

 

'ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಪೋಷಕರು ಮತ್ತು ಪ್ರೀತಿಪಾತ್ರರಿಗೆ ದೇವರು ಈ ನಷ್ಟವನ್ನು ಭರಿಸುವ ಶಕ್ತಿ ನೀಡಲಿ' ಎಂದು 'ಯಕ್ಷತರಂಗ ಬೆಂಗಳೂರು' ಪತ್ರಿಕಾ ಪ್ರಕಟಣೆಯಲ್ಲಿ ಸಂತಾಪ ಸೂಚಿಸಿದೆ.

 

ಕಲಿಕೆಯಲ್ಲೂ ಉತ್ತಮ, ಆಟೋಟದಲ್ಲೂ ಮುಂದೆ ಇದ್ದ ಈ ಭರವಸೆಯ ಯುವ ಪ್ರತಿಭೆಯನ್ನು ಕಳೆದುಕೊಂಡ ಸಂಪೂರ್ಣ ಕುಟುಂಬ, ಸ್ನೇಹಿತರು ಮತ್ತು ಯಕ್ಷಗಾನ ಸಮುದಾಯ ತೀವ್ರ ದುಃಖದಲ್ಲಿ ಮುಳುಗಿದೆ.