ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಇತ್ತೀಚಿನ ಬೆಳವಣಿಗೆಗಳಲ್ಲಿ, 'ಗಡೀಪಾರು ' ಎಂಬ ದಂಡನೆಯನ್ನು ಅಸ್ತ್ರವಾಗಿ ಬಳಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಸಾರ್ವಜನಿಕರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಮುದಾಯಗಳ ನಡುವೆ ಶಾಂತಿ ಮರುಸ್ಥಾಪನೆಗೆ ಬೇಕಾಗಿರುವ ಮಾತುಕತೆ, ಸಂಧಾನ ಮತ್ತು ಪರಸ್ಪರ ನಂಬಿಕೆ ಬೆಳೆಸುವ ಕೆಲಸದ ಬದಲು, ತಕ್ಷಣದ ಕಾನೂನು ಕ್ರಮಗಳನ್ನು ಮೊದಲಿಗೆ ತೆಗೆದುಕೊಳ್ಳುತ್ತಿರುವ ಕ್ರಮದ ಪರಿಣಾಮ ಕುರಿತು ಜನತೆ ಆಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಶ್ನೆ ಇಷ್ಟೆ – ಇಂತಹ ಗಡೀಪಾರಿನ ಯೋಜನೆ, ಜಿಲ್ಲೆಯಲ್ಲಿ ಶಾಂತಿಯ ಸ್ಥಾಪನೆಗೆ ಸಹಕಾರಿಯಾಗುತ್ತದೆಯೇ ಅಥವಾ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳುವುದಕ್ಕೆ ಕಾರಣವಾಗುತ್ತದೆಯೇ? ಒಂದು ವೇಳೆ ಯಾವುದೋ ಸಮುದಾಯದ ಮುಖಂಡರು ಹಿಂಸೆಗೆ ಉತ್ತೇಜನೆ ನೀಡಿದರೆ ಅಥವಾ ಶಾಂತಿಯ ಮಾತುಕತೆಯಿಂದ ದೂರವಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ತಪ್ಪಿಲ್ಲ. ಆದರೆ, ಜನರು ತೀವ್ರವಾಗಿ ಪ್ರಶ್ನಿಸುತ್ತಿರುವುದು – ಅಧಿಕಾರಿಗಳ ತ್ವರಿತ ವರ್ಗಾವಣೆ, ನೈಜ ಮಾಹಿತಿ ಇಲ್ಲದೆ ಕೈಗೊಂಡ ಕ್ರಮಗಳು ಎಲ್ಲಿ ನ್ಯಾಯಾಂಗದ ಮೌಲ್ಯಗಳಿಗೆ ಹೋಲಿಕೆಯಾಗಿದೆ ಎಂದು.
ಬಿಜೆಪಿ ಆರೋಪಿಸುತ್ತಿರುವಂತೆ, ಹಿಂದೂ ಕಾರ್ಯಕರ್ತರನ್ನು ಮಾತ್ರ ಗುರಿ ಮಾಡಿದಂತೆ ಕಂಡುಬರುತ್ತಿರುವ ಕ್ರಮಗಳು ಸರ್ಕಾರದ ಪಕ್ಷಪಾತದ ಗುಣಲಕ್ಷಣಗಳು ಕಾಣಿಸುತ್ತಿವೆ. ದಕ್ಷಿಣ ಕನ್ನಡ ಭಾಗಗಳಲ್ಲಿ ಹಿಂದೂ ಮುಖಂಡರ ಮನೆಗೆ ರಾತ್ರಿ ಹೊತ್ತು ಭೇಟಿ ನೀಡಿ GPS ಮತ್ತು ಫೋಟೋ ತೆಗೆಯುತ್ತಿರುವ ಪೊಲೀಸ್ ಕ್ರಮ, ಜನತೆಯಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸುತ್ತಿದೆ. ಶಾಂತಿಯತ್ತ ಮುನ್ನಡೆಯುವ ಉದ್ದೇಶವಿದ್ದರೆ, ದಿನದ ಹೊತ್ತಿನಲ್ಲಿ ಕರೆಸಿ ಸಮಾಧಾನಾತ್ಮಕ ಮಾತುಕತೆ ನಡೆಸಬಹುದಲ್ಲವೇ ಎಂಬ ಪ್ರಶ್ನೆ ಬಹುತೇಕ ಮನೆ ಮನೆಗಳಲ್ಲಿ ಕೇಳಿಬರುತ್ತಿದೆ.
ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿರುವ ವಿಷಯ ಕೂಡ ಸಾರ್ವಜನಿಕ ಮರ್ಮವನ್ನು ತಟ್ಟಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಆಗದಿದ್ದರೆ, ಪ್ರತಿಭಟನೆಗೆ ಪರ್ಮಿಷನ್ ಇಲ್ಲ ಎಂಬ ಕಾರಣ ಮಾತ್ರಕ್ಕೆ ಕೇಸು ದಾಖಲಿಸುವುದು ನ್ಯಾಯವಿರುದ್ಧ ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ. ಪೊಲೀಸ್ ಠಾಣೆಗೇ ಹತ್ತಿರ ಹೋಗಲು ಪರ್ಮಿಷನ್ ಬೇಕೆ? ಎಂಬ ಪ್ರಶ್ನೆಯೂ ಜನತೆಯಲ್ಲಿ ಮೂಡಿದೆ.
ಇದೇ ವೇಳೆ, ಪ್ರಭಾಕರ ಭಟ್ ಮೇಲೆ ದಾಖಲಾದ ಎಫ್ಐಆರ್ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಷಣ ನೀಡಿದ 20 ದಿನಗಳ ನಂತರ ಎಚ್ಚರಗೊಂಡ ಪೊಲೀಸ್ ಇಲಾಖೆ, ಕ್ರಮ ಕೈಗೊಂಡಿದ್ದು ರಾಜಕೀಯ ಪ್ರೇರಿತವೇ ಎಂಬ ಅನುಮಾನ ಮೂಡಿಸಿದೆ. ಹೈಕೋರ್ಟ್ನಿಂದ ದೊರೆತ ರಿಲೀಫ್ ಕೂಡ ಈ ಕುರಿತು ಸರ್ಕಾರ ಹಾಗೂ ಪೊಲೀಸರ ನಡೆಗೆ ಪ್ರಶ್ನಾರ್ಥಕ ಚಿಹ್ನೆ ಎಳೆದಿದೆ.
ಹೆಚ್ಚಾಗಿ ಕೇಳಿಬರುತ್ತಿರುವ ಇನ್ನೊಂದು ಪ್ರಶ್ನೆ – ಸಿಎಎ ಮತ್ತು ಎನ್ಆರ್ಸಿ ವಿರುದ್ಧ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್, ಇದೀಗ ಮುಖಂಡರನ್ನು ತಾನು ವಾಸ್ತವ್ಯವಿದ್ದ ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಗಡಿಪಾರು ಮಾಡುತ್ತಿರುವುದನ್ನು ನ್ಯಾಯಸಮ್ಮತ ಎನ್ನುತ್ತದೆಯೇ? ಈ ನಿಲುವುಗಳು ಪರಸ್ಪರ ವಿರುದ್ಧವಾಗಿವೆ ಎಂಬ ಅಭಿಪ್ರಾಯ ಸಾಮಾನ್ಯ ಜನರಲ್ಲಿ ವ್ಯಾಪಕವಾಗಿದೆ.
ಕರಾವಳಿಯ ರಾಜಕೀಯದಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಹಿಂದೆ ಪಿಎಫ್ಐ ಸಂಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು, ಇದೀಗ ಆ ಸಂಘಟನೆಯವರಿಗೆ ನೇರ ಅಥವಾ ಪರೋಕ್ಷ ರಕ್ಷಣೆ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಮೂಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಒಲೈಕೆ ರಾಜಕೀಯವು ಶ್ರದ್ಧೆಗಿಂತ ಹೆಚ್ಚು ಅನುಮಾನಗಳಿಗೆ ಕಾರಣವಾಗುತ್ತಿದೆ.
ಒಟ್ಟಾರೆ, ಸಾರ್ವಜನಿಕರು ಒತ್ತಾಯಿಸುತ್ತಿರುವುದು ಸ್ಪಷ್ಟ – ಗಡೀಪಾರಿನಂತಹ ತಾತ್ಕಾಲಿಕ ಕ್ರಮಗಳಿಂದ ಶಾಶ್ವತ ಶಾಂತಿ ಸಿಗದು. ಸಮಧಾನ, ಸಂವಾದ ಮತ್ತು ಪರಸ್ಪರ ಗೌರವವೇ ಈ ಭಾಗದ ಶಾಂತಿಯ ನೈಜ ಮೂಲಾಧಾರಗಳಾಗಬೇಕು. ಇಲ್ಲದಿದ್ದರೆ, ಈ ದಕ್ಷಿಣ ಕನ್ನಡ ಜಿಲ್ಲೆ, ಯಾವತ್ತಿಗೂ ಬೆಳಕಿನ ಕಡೆ ನಡೆಯಲು ಸಾಧ್ಯವಾಗದು ಎಂಬ ಆತಂಕ ಜನಸಾಮಾನ್ಯರಲ್ಲಿ ಹೆಚ್ಚುತ್ತಿದೆ.